ಬಸವಕಲ್ಯಾಣ: ‘ಬಸವತತ್ವದಲ್ಲಿ ಮಾನವ ಹಕ್ಕುಗಳ ಪ್ರತಿಪಾದನೆಯಿದೆ. ನಾವೂ ಬದುಕಬೇಕು. ಇತರರೂ ಬದುಕಬೇಕು ಎಂಬ ಸದುದ್ದೇಶ ಅದರಲ್ಲಿ ಅಡಗಿದೆ’ ಎಂದು ಇಳಕಲ್ ಗುರುಮಹಾಂತ ಸ್ವಾಮೀಜಿ ಹೇಳಿದರು.
ಇಲ್ಲಿನ ಜೈಶಂಕರ ಓಣಿಯಲ್ಲಿ ಬುಧವಾರ ಆಯೋಜಿಸಿದ್ದ ಅನುಭವ ಮಂಟಪ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಬಸವಣ್ಣನವರು ಕಾಯಕ, ದಾಸೋಹಕ್ಕೆ ಮಹತ್ವ ನೀಡಿದ್ದರು. ಅಕ್ಕಿಕಾಳು ಚೆಲ್ಲುವುದು ಅಪರಾಧ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಆಹಾರಧಾನ್ಯಗಳನ್ನು ಹಾಳು ಮಾಡಬಾರದು’ ಎಂದರು.
ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷರಾದ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಬಸವತತ್ವದಲ್ಲಿ ಜಾತಿ, ಧರ್ಮಭೇದಕ್ಕೆ ಅವಕಾಶವಿಲ್ಲ. ಬಸವಣ್ಣನವರು ಇವನಾರವ ಇವನಾರವ ಎನ್ನದೆ ಇವನಮ್ಮವ ಎಂದು ಎಲ್ಲರನ್ನೂ ಅಪ್ಪಿಕೊಂಡಿದ್ದಾರೆ. ಅವರ ಕನಸು ನನಸಾಗಿ ಎಲ್ಲೆಡೆ ಸಮಾನತೆ ಜಾರಿಗೊಳ್ಳಬೇಕಾಗಿದೆ’ ಎಂದರು.
ಬಸವೇಶ್ವರ ದೇವಸ್ಥಾನ ಸಮಿತಿ ನಿರ್ದೇಶಕರಾದ ವಿಜಯಲಕ್ಷ್ಮಿ ಗುರುನಾಥ ಗಡ್ಡೆ ಅವರನ್ನು ಸನ್ಮಾನಿಸಲಾಯಿತು. ಭಾಲ್ಕಿ ಗುರುಬಸವ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ್, ಡಾ.ಎಸ್.ಬಿ.ದುರ್ಗೆ, ಚಂದ್ರಕಾಂತ ಜಾಧವ, ಎಇಇ ವಿಶ್ವನಾಥ ಧರಣೆ, ವೀರೇಶ ಕುಂಬಾರ, ಶಾಲಿವಾನ ಬಿರಾದಾರ, ಶಿವಶರಣಯ್ಯ ಮಠಪತಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.