ADVERTISEMENT

ಬಸವಕಲ್ಯಾಣ | ತುಂಬಿ ಹರಿಯುತ್ತಿರುವ ನದಿ: ಬೆಣ್ಣೆತೊರೆ ದಂಡೆಯಲ್ಲಿ ಜಮೀನು ಹಾಳು

ಮಾಣಿಕ ಆರ್ ಭುರೆ
Published 9 ಅಕ್ಟೋಬರ್ 2025, 4:56 IST
Last Updated 9 ಅಕ್ಟೋಬರ್ 2025, 4:56 IST
<div class="paragraphs"><p>ಬಸವಕಲ್ಯಾಣ ತಾಲ್ಲೂಕಿನ ಹತ್ತರ್ಗಾ ವ್ಯಾಪ್ತಿಯಲ್ಲಿನ ಹೊಲದಲ್ಲಿ ಬೆಣ್ಣೆತೊರೆ ನದಿ ನೀರು ನುಗ್ಗಿದ್ದರಿಂದ ಕೇವಲ ಕಲ್ಲುಗಳು ಕಾಣುತ್ತಿವೆ</p></div>

ಬಸವಕಲ್ಯಾಣ ತಾಲ್ಲೂಕಿನ ಹತ್ತರ್ಗಾ ವ್ಯಾಪ್ತಿಯಲ್ಲಿನ ಹೊಲದಲ್ಲಿ ಬೆಣ್ಣೆತೊರೆ ನದಿ ನೀರು ನುಗ್ಗಿದ್ದರಿಂದ ಕೇವಲ ಕಲ್ಲುಗಳು ಕಾಣುತ್ತಿವೆ

   

ಬಸವಕಲ್ಯಾಣ: ತಾಲ್ಲೂಕಿನ ಗಡಿಗೆ ಹತ್ತಿಕೊಂಡಿರುವ ಬಟಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳ ಜಮೀನುಗಳಿಂದ ಹಾದು ಹೋಗುವ ಬೆಣ್ಣೆತೊರೆ ನದಿ ಉಕ್ಕಿ ಹರಿದು ಬೆಳೆ ಹಾನಿಯಾಗಿದೆ. ಅಲ್ಲಲ್ಲಿ ಮಣ್ಣು ಸಹ ಕೊಚ್ಚಿಕೊಂಡು ಹೋಗಿದ್ದರಿಂದ ರೈತರು ನಷ್ಟ ಅನುಭವಿಸಿದ್ದಾರೆ.

ಧಾರಾಕಾರ ಮಳೆಯಿಂದ ಸಮತಟ್ಟಾದ ಹೊಲಗಳಲ್ಲಿಯೂ ಕೆಲ ದಿನಗಳಿಂದ ನೀರು ಒಸರುತ್ತಿದೆ. ಮಳೆ ನೀರು ಸಂಗ್ರಹಗೊಂಡು ಒಣಗಿದರೆ ಏನೂ ಆಗುತ್ತಿರಲಿಲ್ಲ. ಆದರೆ, ಜಮೀನಿನಿಂದ ತಿಳಿ ನೀರು ಚಿಮ್ಮುತ್ತಿರುವ ಕಾರಣ ರೈತರಿಗೆ ದೊಡ್ಡ ಸಂಕಟ ಎದುರಾಗಿದೆ. ಹೀಗಾಗಿ ಬೆಳೆ ಬೆಳೆಯುವುದಿರಲಿ, ಮತ್ತೆ ಬಿತ್ತನೆ ಕೈಗೊಳ್ಳುವುದಕ್ಕೆ ಹಾಗೂ ಇತರೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಹ ಬಾರದಂಥ ಪರಿಸ್ಥಿತಿ ಎದುರಾಗಿದೆ.

ADVERTISEMENT

ಇಂಥದರಲ್ಲಿ ನದಿ ನೀರು ಆಗಾಗ ಹೊಲಗಳಿಗೆ ನುಗ್ಗುತ್ತಿರುವ ಕಾರಣ ಬೆಳೆ ಅಷ್ಟೇ ಅಲ್ಲ, ಮಣ್ಣು ಸಹ ಉಳಿಯದಂತಾಗಿದೆ. ಶಿರಗೂರ, ಹತ್ತರ್ಗಾ, ಚಿತ್ತಕೋಟಾ, ಗಿಲಗಿಲಿ ವ್ಯಾಪ್ತಿಯಲ್ಲಿ ಮಳೆ ಮತ್ತು ನದಿ ನೀರಿನಿಂದ ಹಾನಿಯಾಗಿದೆ.

‘ಬಟಗೇರಾದಿಂದ ಹತ್ತರ್ಗಾಕ್ಕೆ ಹೋಗುವ ರಸ್ತೆಯಲ್ಲಿನ ಸೇತುವೆ, ಬಟಗೇರಾ ವಾಡಿ ಸೇತುವೆಗೆ ಹಾನಿಯಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಸಮೀಪದ ಹೊಲಗಳಲ್ಲಿಯೂ ನೀರು ನುಗ್ಗಿದ್ದರಿಂದ ಬರಿ ಕಲ್ಲುಬಂಡೆಗಳು ಕಾಣುತ್ತಿವೆ. ಆದ್ದರಿಂದ ಸಂಬಂಧಿತರು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಪರಿಹಾರ ಒದಗಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ನಾಯಕ ಆಗ್ರಹಿಸಿದ್ದಾರೆ.

ಮೂರು ಜಿಲ್ಲೆ ಕೂಡುವ ಸ್ಥಳ

ನದಿಯು ತಾಲ್ಲೂಕಿನ ಸರಹದ್ದಿನ ಅಲ್ಪ ಭಾಗದಲ್ಲಿ ಮಾತ್ರ ಹರಿಯುತ್ತದೆ. ವಿಶೇಷವೆಂದರೆ ಇದು ಬೀದರ್ ಕಲಬುರಗಿ ಮತ್ತು ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ಸಂಧಿಸುವ ಸ್ಥಳವಾಗಿದೆ. ಉಮರ್ಗಾ ತಾಲ್ಲೂಕಿನ ಧಾನೂರನಿಂದ ಪೂರ್ವಾಭಿಮುಖವಾಗಿ ಈ ತಾಲ್ಲೂಕಿಗೆ ಪ್ರವೇಶಿಸುತ್ತದೆ. ಗದ್ಲೇಗಾಂವ ಶಿರಗೂರ ಬಟಗೇರಾವಾಡಿ ಹತ್ತರ್ಗಾ ಚಿತ್ತಕೋಟಾ ಗಿಲಗಿಲಿ ವ್ಯಾಪ್ತಿಯಲ್ಲಿ ಹರಿದು ಮುಂದೆ ಆಳಂದ ತಾಲ್ಲೂಕಿನ ಬೆಳಮಗಿ ಮೂಲಕ ಮುಂದೆ ಸಾಗುತ್ತದೆ. ಮುಖ್ಯವೆಂದರೆ ಈ ಎಲ್ಲ ಚಿಕ್ಕ ಚಿಕ್ಕ ಗ್ರಾಮಗಳು ನದಿ ದಂಡೆಗೆ ಸಮೀಪವೇ ಇವೆ.

ಬಸವಕಲ್ಯಾಣ ತಾಲ್ಲೂಕಿನ ಬಟಗೇರಾವಾಡಿ ಸಮೀಪದ ನಾಲೆಯ ಸೇತುವೆಗೆ ಹಾನಿ ಆಗಿದೆ
ಬಸವಕಲ್ಯಾಣ ತಾಲ್ಲೂಕಿನ ಚಿತ್ತಕೋಟಾ ಗ್ರಾಮದ ವ್ಯಾಪ್ತಿಯ ಹೊಲದಲ್ಲಿ ಸತತ ನೀರು ಒಸರುತ್ತಿದೆ
ಬೆಣ್ಣೆತೊರೆ ನದಿಯಲ್ಲಿ ಕೆಲ ದಿನಗಳಿಂದ ಹೆಚ್ಚಿನ ನೀರು ಹರಿಯುತ್ತಿದೆ. ಹೀಗಾಗಿ ದಂಡೆಯಲ್ಲಿನ ಹೊಲಗಳಲ್ಲಿ ನೀರು ನುಗ್ಗಿದ್ದು ಬೆಳೆಗಳು ಸಂಪೂರ್ಣ ಹಾಳಾಗಿವೆ.
-ಪಂಡಿತ್ ಎಂ.ದಳಪತಿ ಚಿತ್ತಕೋಟಾ
ಧಾರಾಕಾರ ಮಳೆ ಮತ್ತು ಮಹಾರಾಷ್ಟ್ರದ ಅಣ್ಣೆಕಟ್ಟೆಯಿಂದ ಸತತ ನೀರು ಉಕ್ಕಿ ಕೆಲ ಹೊಲಗಳು ಕೆರೆಯಂತಾಗಿವೆ. ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು.
-ಸೋಮನಾಥ ಬಿರಾದಾರ, ಮಾಜಿ ಅಧ್ಯಕ್ಷ ಪಿಕೆಪಿಎಸ್
ಬಟಗೇರಾವಾಡಿ ಸೇತುವೆಯ ಒಂದು ಭಾಗ ಕೊಚ್ಚಿಕೊಂಡು ಹೋಗಿದ್ದು ಬಸ್ ಸಂಚಾರ ಸ್ಥಗಿತಗೊಂಡಿದೆ. ಶೀಘ್ರ ದುರುಸ್ತಿ ಕೈಗೊಂಡು ಬಸ್ ಸಂಚಾರ ಆರಂಭಿಸಬೇಕು.
-ಮಲ್ಲಿಕಾರ್ಜುನ ನಾಯಕ ಸದಸ್ಯ ಗ್ರಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.