ಬೀದರ್: ಬೀದರ್ ಜಿಲ್ಲೆಯ ರೈಲ್ವೆ ಸೌಲಭ್ಯಗಳಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಾಗರಿಕರ ಅನುಕೂಲಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಇಡಲಾಗಿದೆ ಎಂದು ಹೇಳಿದ್ದಾರೆ.
ಕೊಲ್ಹಾಪುರ-ಕಲಬುರಗಿ ಎಕ್ಸ್ಪ್ರೆಸ್ ಹೊಸ ರೈಲು ಬೀದರ್ ವರೆಗೆ ವಿಸ್ತರಿಸಬೇಕು. ನಾಂದೇಡ್-ಹುಬ್ಬಳ್ಳಿ-ನಾಂದೇಡ್ ಪ್ರಾಯೋಗಿಕ ರೈಲು ವಿಕಾರಾಬಾದ್ ಮಾರ್ಗದ ಬದಲು ಹುಮನಾಬಾದ್-ಕಲಬುರಗಿ-ವಾಡಿ ಮಾರ್ಗವಾಗಿ ಓಡಿಸಬೇಕು. ಬೀದರ್ನಿಂದ ಹುಮನಾಬಾದ್-ಕಲಬುರಗಿ ಮಾರ್ಗವಾಗಿ ಮೈಸೂರು ಹಾಗೂ ಹುಬ್ಬಳ್ಳಿಗೆ ವಂದೇ ಮಾತರಂ ರೈಲು ಓಡಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಕಮನಗರ ರೈಲು ನಿಲ್ದಾಣದಲ್ಲಿ ಯಶವಂತಪುರ-ಲಾತೂರ, ಲಾತೂರ-ಯಶವಂತಪುರ ರೈಲು ನಿಲುಗಡೆಯಾಗಬೇಕು. ನಾಂದೇಡ್-ಬೆಂಗಳೂರು ಲಿಂಕ್ ಎಕ್ಸ್ಪ್ರೆಸ್ ರೈಲನ್ನು ಈ ಹಿಂದೆ ಕಮಲನಗರ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಕೋವಿಡ್ ನಂತರ ರದ್ದುಪಡಿಸಲಾಗಿದೆ. ಯಶವಂತಪುರ-ಲಾತೂರ, ಲಾತೂರ-ಯಶವಂತಪುರ ಹಾಗೂ ಬೀದರ್ ಮೂಲಕ ಶಿರಡಿಗೆ ತೆರಳುವ ಎಲ್ಲ ರೈಲುಗಳು ಕಮಲನಗರದಲ್ಲಿ ನಿಲುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.