
ಭಾಲ್ಕಿ ತಾಲ್ಲೂಕಿನ ಸಿದ್ದೇಶ್ವರ ಗ್ರಾಮದಿಂದ ಒಳ ಮಾರ್ಗವಾಗಿ ತಳವಾಡ (ಕೆ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯನ್ನು ತೋರಿಸುತ್ತಿರುವ ರೈತರು
ಭಾಲ್ಕಿ: ತಾಲ್ಲೂಕಿನ ಸಿದ್ದೇಶ್ವರ ಗ್ರಾಮದಿಂದ ತಳವಾಡ (ಕೆ) ಸಂಪರ್ಕಿಸುವ ಒಳ ರಸ್ತೆ ಮಣ್ಣಿನಿಂದ ಕೂಡಿರುವ ಕಚ್ಚಾ ರಸ್ತೆಯಾಗಿದ್ದು ರೈತರು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮಣ್ಣಿನಿಂದ ಕೂಡಿರುವ ಸುಮಾರು ಎರಡೂವರೆ ಕಿಲೋ ಮೀಟರ್ ರಸ್ತೆಯ ಅಕ್ಕಪಕ್ಕ ಜಾಲಿಗಿಡಗಳು ಬೆಳೆದಿದ್ದು ದ್ವಿಚಕ್ರ ವಾಹನ ಚಾಲನೆಗೂ ತೀವ್ರ ಸಮಸ್ಯೆಯಾಗುತ್ತಿದೆ. ಕೆಲ ಕಡೆಗಳಲ್ಲಿ ರಸ್ತೆ ಅಕ್ಕಪಕ್ಕದ ಮಣ್ಣು ಕುಸಿದಿದ್ದು, ಕಂದಕ ನಿರ್ಮಾಣಗೊಂಡಿವೆ. ಇದರಿಂದ ವಾಹನಗಳ ಓಡಾಟ ಕಷ್ಟ ಸಾಧ್ಯ ಎಂಬತ್ತಾಗಿದೆ. ಮಳೆಗಾಲದಲ್ಲಂತೂ ಈ ಮಾರ್ಗದಿಂದ ನಡೆದುಕೊಂಡು ಹೋಗುವುದು ಸಹ ದುಸ್ತರದ ಮಾತಾಗಿದೆ ಎನ್ನುವುದು ಸಾರ್ವಜನಿಕರ ಅಳಲು.
‘ನಮ್ಮ ಗ್ರಾಮದಿಂದ ಮುಖ್ಯರಸ್ತೆಯ ಮಾರ್ಗವಾಗಿ ತಾಲ್ಲೂಕು ಕೇಂದ್ರವಾದ ಭಾಲ್ಕಿ ಪಟ್ಟಣಕ್ಕೆ ತೆರಳಲು 11 ಕಿ. ಮೀ. ಕ್ರಮಿಸಬೇಕು. ಆದರೆ ಒಳಮಾರ್ಗವಾಗಿ ತಳವಾಡ (ಕೆ) ಗ್ರಾಮದ ಮೂಲಕ ಸಂಚರಿಸಿದರೆ ಕೇವಲ 8 ಕಿ.ಮೀ ಆಗುತ್ತದೆ. ಇದರಿಂದ ನಾನಾ ಕೆಲಸಗಳ ನಿಮಿತ್ತ ಪ್ರತಿದಿನ ತಾಲ್ಲೂಕು ಕೇಂದ್ರಕ್ಕೆ ತೆರಳುವ ಸಾರ್ವಜನಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಸಮಯ ಹಾಗೂ ಇಂಧನದ ಉಳಿತಾಯ ಆಗುತ್ತದೆ’ ಎಂದು ರೈತರಾದ ಶಾಮರಾವ್ ಪರಮಾ, ಪರಮೇಶ್ವರ ಗೌರ ತಿಳಿಸಿದರು.
ಕಚ್ಚಾರಸ್ತೆ ಹಿನ್ನೆಲೆಯಲ್ಲಿ ಈ ಮಾರ್ಗದ ರಸ್ತೆಯ ಅಕ್ಕ ಪಕ್ಕದಲ್ಲಿರುವ ಸಿದ್ದೇಶ್ವರ ಮತ್ತು ತಳವಾಡ (ಕೆ) ಗ್ರಾಮದ ಅನ್ನದಾತರಿಗೆ ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ತುಂಬಾ ಅನಾನುಕೂಲವಾಗುತ್ತಿದೆ. ಮಳೆಗಾಲದಲ್ಲಂತೂ ಈ ಮಾರ್ಗದಿಂದ ನಡೆದುಕೊಂಡು ಹೊಲಗಳಿಗೆ ತೆರಳುವುದು ತುಂಬಾ ಕಷ್ಟವಾಗುತ್ತಿದೆ. ಇನ್ನು ರಾಶಿಯ ಸಮಯದಲ್ಲಿ ಹೊಲಗಳಲ್ಲಿ ಬೆಳೆದ ಬೆಳೆಗಳನ್ನು ಮನೆಗಳಿಗೆ ತೆಗೆದುಕೊಂಡು ಒಯ್ಯಲು ಸಹ ತುಂಬಾ ಹರಸಹಾಸ ಪಡುವಂತಾಗಿದೆ. ಕೂಡಲೇ ಸಂಬಂಧಪಟ್ಟಂತಹ ಅಧಿಕಾರಿಗಳು, ಜನಪ್ರತಿನಿಧಿಗಳು ಈ ರಸ್ತೆಯನ್ನು ಡಾಂಬರೀಕರಣಗೊಳಿಸಿ ಅನ್ನದಾತರಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.