ADVERTISEMENT

ಬೀದರ್ | ಕಲ್ಯಾಣ ಕರ್ನಾಟಕ ಹಸರೀಕರಣಕ್ಕೆ ಒತ್ತು: ಸಚಿವ ಈಶ್ವರ ಬಿ. ಖಂಡ್ರೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 13:59 IST
Last Updated 9 ಫೆಬ್ರುವರಿ 2025, 13:59 IST
ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊರತಂದ ಕ್ಯಾಲೆಂಡರ್ ಮತ್ತು ಡೈರಿಯನ್ನು ಬೀದರ್‌ನಲ್ಲಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಬಿಡುಗಡೆಗೊಳಿಸಿದರು. ಸುನಿಲ್ ಪನ್ವಾರ್, ಸುಮಿತ್ ಪಾಟೀಲ ಸೇರಿದಂತೆ ವಿವಿಧ ಜಿಲ್ಲೆಗಳ ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು
ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊರತಂದ ಕ್ಯಾಲೆಂಡರ್ ಮತ್ತು ಡೈರಿಯನ್ನು ಬೀದರ್‌ನಲ್ಲಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಬಿಡುಗಡೆಗೊಳಿಸಿದರು. ಸುನಿಲ್ ಪನ್ವಾರ್, ಸುಮಿತ್ ಪಾಟೀಲ ಸೇರಿದಂತೆ ವಿವಿಧ ಜಿಲ್ಲೆಗಳ ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು   

ಬೀದರ್: ‘ಕಲ್ಯಾಣ ಕರ್ನಾಟಕದಲ್ಲಿ ಸದ್ಯ ಶೇ 5ರಷ್ಟು ಹಸಿರು ಹೊದಿಕೆ ಇದ್ದು, ಹಸರೀಕರಣ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೀದರ್ ಜಿಲ್ಲೆಗೆ ₹ 20 ಕೋಟಿ ಹಾಗೂ ಕಲಬುರಗಿ ಜಿಲ್ಲೆಗೆ ₹ 10 ಕೋಟಿ ಅನುದಾನ ಮಂಜೂರು ಮಾಡಲಾಗಿದೆ’ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಅವರು ಭಾನುವಾರ ನಗರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅರಣ್ಯ ಇಲಾಖೆ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 2025ನೇ ಸಾಲಿನ ದಿನಚರಿ ಹಾಗೂ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

‘ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಟಕದಲ್ಲಿ ಹಸಿರು ಹೊದಿಕೆ ತೀರ ಕಡಿಮೆಯಿದೆ. ಈ ಭಾಗದಲ್ಲಿ ಹಸಿರು ಹೊದಿಕೆ ಹೆಚ್ಚಿಸುವುದು ದೊಡ್ಡ ಸವಾಲಾಗಿದೆ. ಸದ್ಯ ಶೇ 5ರಷ್ಟು ಅರಣ್ಯ ಕ್ಷೇತ್ರವಿದ್ದು ಮುಂಬರುವ 3 ವರ್ಷಗಳಲ್ಲಿ ಶೇ 10ರಷ್ಟು ಹಸಿರು ಹೊದಿಕೆ ಹೆಚ್ಚಿಸುವಲ್ಲಿ ಅರಣ್ಯ ಸಿಬ್ಬಂದಿ, ಅಧಿಕಾರಿಗಳು ಯೋಜನಾ ಬದ್ಧವಾಗಿ ಪ್ರಮಾಣಿಕ ಶ್ರಮಿಸಬೇಕು’ ಎಂದರು.

ADVERTISEMENT

‘ಕಂದಾಯ ಭೂಮಿಗಳಲ್ಲಿ ಗಿಡ, ಮರಗಳನ್ನು ನೆಡುವ ಕಾರ್ಯ ಯುದ್ದೋಪಾದಿಯಲ್ಲಿ ಕೈಗೊಳ್ಳಬೇಕಿದೆ. ಈ ಭಾಗದ 41 ಕ್ಷೇತ್ರ 41 ಸಾವಿರ ಕಿ.ಮೀ. ರಸ್ತೆ ಬದಿಗಳಲ್ಲಿ ಎತ್ತರದ ಸಸಿಗಳನ್ನು ನೆಡಲಾಗುವುದು. ಕೆರೆಗಳ ಸುತ್ತ, ಶಾಲಾ ಆವರಣಗಳಲ್ಲಿ ರೈತರ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಸಂರಕ್ಷಿಸಿ ಹಸರೀಕರಣ ಹೆಚ್ಚಳ ಮಾಡಬೇಕೆಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈಚೆಗೆ ಜರುಗಿದ ಉನ್ನತ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ರಾಜ್ಯದ ಒಟ್ಟು ಬಜೆಟ್‌ನ ಶೇ 1ರಷ್ಟು ಅನುದಾನವನ್ನು ಈ ಬಾರಿ ಅರಣ್ಯ ಇಲಾಖೆಗೆ ನೀಡುವಂತೆ ತಾವು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ. ಇದರಿಂದಾಗಿ ಸುಮಾರು ₹ 4 ಸಾವಿರ ಕೋಟಿ ಅನುದಾನ ದೊರೆಯುವ ಸಾಧ್ಯತೆ ಇದೆಯೆಂದರು.

‘ಬರುವ ವರ್ಷ ಕಲ್ಯಾಣ ಕರ್ನಾಟಕ ಭಾಗಕ್ಕೆ ₹ 300 ಕೋಟಿ ಅನುದಾನ ಹೆಚ್ಚಿಗೆ ನೀಡುವಂತೆ ಕೇಳಲಾಗಿದೆ. ಅಲ್ಲದೆ ಕೆಕೆಆರ್‌ಡಿಬಿಯಿಂದ ₹ 150 ಕೋಟಿ ಅನುದಾನ ದೊರೆಯಲಿದೆ. ಬೀದರ್‌ನಲ್ಲಿ ಕೃಷ್ಣಮೃಗ ಸಂರಕ್ಷಿತ ಧಾಮ ಆರಂಭವಾಗಲಿದೆ. ಪರಿಸರ ಪ್ರವಾಸೋದ್ಯಮ ಆರಂಭಗೊಳ್ಳಲಿದೆ. ಪಕ್ಷಿಧಾಮವನ್ನು ಸಹ ನಿರ್ಮಿಸಲಾಗುತ್ತಿದೆಯೆ’ ಎಂದು ಹೇಳಿದರು. 

ಕಲ್ಯಾಣ ಕರ್ನಾಟಕ ಪ್ರದೇಶ ಅರಣ್ಯ ಇಲಾಖೆ ನೌಕರರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಚಿವರು ಈ ಭಾಗದಲ್ಲಿ ಎಲ್ಲ ಸ್ತರದ ಹುದ್ದೆಗಳಿಗೆ ಈಗಾಗಲೇ ಮುಂಬಡ್ತಿ ನೀಡಲಾಗಿದೆ. ಈ ಭಾಗದಲ್ಲಿ ಹೆಚ್ಚಿನ ಹುದ್ದೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕದ ಭಾಗದಲ್ಲಿ ಕಾನೂನಿನ ಪ್ರಕಾರ ದೊರೆಯಬೇಕಾದ ಶೇ 8ರಷ್ಟು ಅಧಿಕಾರಿಗಳ ಮುಂಬಡ್ತಿಯನ್ನು ಕಡ್ಡಾಯವಾಗಿ ನೀಡುವಂತೆ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಸಚಿವರು ಹೇಳಿದರು.

ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ ಪನ್ವಾರ್, ಕಲ್ಯಾಣ ಕರ್ನಾಟಕ ಪ್ರದೇಶ ನೌಕರರ ಸಂಘದ ಅಧ್ಯಕ್ಷ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ ಸೇರಿದಂತೆ ಐದು ಜಿಲ್ಲೆಗಳ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.