ಬೀದರ್ನ ಹಳೆ ತರಕಾರಿ ಮಾರುಕಟ್ಟೆ ಸಮೀಪದ ಗಾದಿ ಗೋದಾಮಿನಲ್ಲಿ ಹೊತ್ತಿಕೊಂಡಿದ್ದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ
ಬೀದರ್: ನಗರದ ಹಳೆ ತರಕಾರಿ ಮಾರುಕಟ್ಟೆ ಸಮೀಪದ ಗಾದಿ ತಯಾರಿಸುವ ಹತ್ತಿ ಗೋದಾಮಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಎಂ.ಡಿ. ಇಸ್ಮಾಯಿಲ್ ಎಂಬುವರಿಗೆ ಸೇರಿದ ಮಳಿಗೆಯಲ್ಲಿ ಈ ಘಟನೆ ನಡೆದಿದೆ. ಗಾದಿ ಮಾಡಲು ತಂದಿಟ್ಟಿದ್ದ ಹತ್ತಿ, ಲಗ್ನಕ್ಕೆ ಬೇಡಿಕೆ ಸಲ್ಲಿಸಿದ್ದ ಸಿದ್ಧಗೊಂಡಿದ್ದ ಗಾದಿಗಳು, ಹತ್ತಿ ಸ್ವಚ್ಛಗೊಳಿಸುವ ಎರಡು ಯಂತ್ರ, 1 ಬೈಕ್ ಸೇರಿದಂತೆ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ. ಅಂದಾಜು ₹30 ಲಕ್ಷ ಮೌಲ್ಯದ ವಸ್ತುಗಳ ಹಾನಿ ಉಂಟಾಗಿದೆ ಎಂದು ಇಸ್ಮಾಯಿಲ್ ತಿಳಿಸಿದ್ದಾರೆ.
‘ಮದುವೆ ಸೀಸನ್ ಇರುವ ಕಾರಣ ಅಧಿಕ ಪ್ರಮಾಣದಲ್ಲಿ ಹತ್ತಿ ಸಂಗ್ರಹಿಸಿ ಇಡಲಾಗಿತ್ತು. ಎಂದಿನಂತೆ ಗುರುವಾರ ರಾತ್ರಿ 9ಕ್ಕೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದಾರೆ. ಇದಾದ ಕೆಲ ನಿಮಿಷಗಳ ನಂತರ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ. ನೆರೆಯ ಮಳಿಗೆಯವರು, ಮನೆಯವರು ನೀರು ಚಿಮ್ಮಿಸಿ ಬೆಂಕಿ ನಂದಿಸಲು ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ.
ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಒಂದು ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅಷ್ಟೊತ್ತಿಗೆ ಗೋದಾಮಿನಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದ್ದವು. ಸರ್ಕಾರ ನೆರವು ನೀಡಬೇಕೆಂದು ಇಸ್ಮಾಯಿಲ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.