ADVERTISEMENT

ಬೀದರ್ ಜಿಲ್ಲೆಯಲ್ಲಿ ಮಳೆ ಹಾನಿ: ಕೂಡಲೇ ಪರಿಹಾರ ವಿತರಣೆಗೆ ಸಚಿವ ಖಂಡ್ರೆ ನಿರ್ದೇಶನ

ರಸ್ತೆ, ಸೇತುವೆ, ವಿದ್ಯುತ್‌ ಪುನರ್‌ಸ್ಥಾಪನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 12:48 IST
Last Updated 19 ಆಗಸ್ಟ್ 2025, 12:48 IST
   

ಬೀದರ್‌: ‘ಜಿಲ್ಲೆಯ ಹಲವೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಡಿತಗೊಂಡಿರುವ ರಸ್ತೆ ಹಾಗೂ ವಿದ್ಯುತ್‌ ಸಂಪರ್ಕ ಕೂಡಲೇ ಮರು ಸ್ಥಾಪಿಸಬೇಕು. ತಡ ಮಾಡದೇ ರೈತರಿಗೆ ಪರಿಹಾರ ವಿತರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ನಿರ್ದೇಶನ ನೀಡಿದರು.

ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಸಚಿವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲಾಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿ, ಜಿಲ್ಲೆಯ ಸ್ಥಿತಿಗತಿಯ ಮಾಹಿತಿ ಪಡೆದರು.

ಮಳೆ ಮತ್ತು ಪ್ರವಾಹದಿಂದ ಜಾನುವಾರುಗಳು ಮೃತಪಟ್ಟಿವೆ. ಮನೆಗಳಿಗೆ ಹಾನಿ ಆಗಿದೆ. ಇದರ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಬೇಕು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ದವಸ, ಧಾನ್ಯ, ಬಟ್ಟೆ, ಪಾತ್ರೆ ಇತ್ಯಾದಿ ಹಾಳಾಗಿರುವ ಪ್ರಕರಣಗಳಲ್ಲಿ ತುರ್ತಾಗಿ ₹5 ಸಾವಿರ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸೂಚಿಸಿದರು.

ADVERTISEMENT

ಮನೆಗಳಿಗೆ ಆಗಿರುವ ಹಾನಿಯ ಪ್ರಮಾಣ ನಿರ್ಧರಿಸಲು ಎಂಜಿನಿಯರ್‌ಗಳನ್ನು ತತ್ ಕ್ಷಣವೇ ಕಳುಹಿಸಿ 48 ಗಂಟೆಯೊಳಗೆ ವರದಿ ತರಿಸಿಕೊಂಡು, ವಿಳಂಬ ಇಲ್ಲದಂತೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಪರಿಹಾರ ನೀಡಬೇಕೆಂದು ತಿಳಿಸಿದರು.

ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆಗೆ ಹಾನಿ ಆಗಿದೆ. ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಬೇಕು. ಸೇತುವೆಗಳು ಕುಸಿದು ರಸ್ತೆ ಸಂಪರ್ಕ ಕಳೆದುಕೊಂಡಿರುವ ಗ್ರಾಮಗಳಿಗೆ ತುರ್ತಾಗಿ ಸಂಪರ್ಕ ಕಲ್ಪಿಸಬೇಕು. ಸೇತುವೆ ಪುನರ್ ನಿರ್ಮಾಣ ಮಾಡುವ ಅಗತ್ಯ ಇರುವ ಕಾಮಗಾರಿಗಳಿಗೆ ಕೂಡಲೇ ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸಬೇಕೆಂದು ಸೂಚಿಸಿದರು.

ಕಳಪೆ ಕಾಮಗಾರಿಯಿಂದ ರಸ್ತೆ, ಸೇತುವೆ ಇತ್ಯಾದಿ ಹಾಳಾಗಿದ್ದರೆ ಆ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ಮಂಗಳವಾರ ಸಂಜೆ ಅಥವಾ ರಾತ್ರಿಯೊಳಗೆ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಬೇಕು. ಅದರ ಮಾಹಿತಿ ವಾಟ್ಸ್ಯಾಪ್‌ನಲ್ಲಿ ಹಂಚಿಕೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೆರೆಯ ಮಹಾರಾಷ್ಟ್ರದಿಂದ ನದಿಗೆ ನೀರು ಬಿಟ್ಟರೆ ಮತ್ತೆ ಸಮಸ್ಯೆ ಎದುರಾಗುತ್ತದೆ. ಕೆಳಭಾಗದ ಜನರಿಗೆ ಮುನ್ನೆಚ್ಚರಿಕೆ ನೀಡಬೇಕು. ಕೆಲವೇ ಮನೆಗಳಿರುವ ಕಡೆ ಪದೇ ಪದೇ ಪ್ರವಾಹದಿಂದ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ಮತ್ತು ಶಾಶ್ವತ ಪರಿಹಾರ ಕಲ್ಪಿಸಲು ಅವರಿಗೆ ಬೇರೆಡೆ ಸರ್ಕಾರಿ ಜಮೀನು ನೀಡಿ ಸ್ಥಳಾಂತರಿಸಲು ಪ್ರಸ್ತಾವ ಸಲ್ಲಿಸಬೇಕು ಎಂದು ಹೇಳಿದರು.

ಎಲ್ಲ ಗ್ರಾಮ ಪಂಚಾಯ್ತಿ ಪಿಡಿಒಗಳಿಗೆ ಕೇಂದ್ರ ಸ್ಥಾನದಲ್ಲಿಯೇ ಇರುವಂತೆ ಮತ್ತು ಮಳೆ ಪೀಡಿತ ಪ್ರದೇಶಗಳಿಗೆ ತೆರಳಿ ರಕ್ಷಣೆ, ಪರಿಹಾರ ಕಾಮಗಾರಿ ಕೈಗೊಳ್ಳಲು ಸೂಚಿಸಬೇಕು. ಕೆರೆಯ ದಂಡೆ ಒಡೆದಿದ್ದರೆ ಕೂಡಲೇ ತಜ್ಞರನ್ನು ಕಳುಹಿಸಿ, ದುರಸ್ತಿ ಮಾಡಬೇಕು. ಕಾಮಗಾರಿಯಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

/ಬಾಕ್ಸ್‌/

ಕೊಚ್ಚಿಹೋದ ಸೇತುವೆ; ಕಾವಲಿಗೆ ಸೂಚನೆ

ಔರಾದ್, ಕಮಲನಗರ ಸೇರಿದಂತೆ ಹಲವೆಡೆ ಸೇತುವೆಗಳು ಕೊಚ್ಚಿಹೋಗಿದ್ದರೂ ಕೆಲವರು ಅದೇ ಮಾರ್ಗವಾಗಿ ತಮ್ಮ ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಅನಾಹುತ ಸಂಭವಿಸದಂತೆ ತಡೆಯಲು ಪೊಲೀಸರು ಕಾವಲು ಹಾಕಬೇಕು. ತಾತ್ಕಾಲಿಕ ತಡೆಗೋಡೆ ಅಳವಡಿಸಬೇಕು. ಸೇತುವೆ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ನಿರ್ದೇಶನ

‘ಪ್ರವಾಹ ಪರಿಸ್ಥಿತಿ ಉಂಟಾದಾಗ ಮನೆಗಳಿಗೆ ನೀರು ನುಗ್ಗಿ ನಾನಾ ಬಗೆಯ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಆದಕಾರಣ ಔರಾದ್, ಕಮಲನಗರ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಮಳೆ ನೀರು ನುಗ್ಗಿರುವ ಪ್ರದೇಶಗಳಲ್ಲಿ ಸಮುದಾಯ ಆರೋಗ್ಯದ ಬಗ್ಗೆ ನಿಗಾ ಇಡಬೇಕು. ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಯಾವುದೇ ಆಸ್ಪತ್ರೆ ಸೋರುತ್ತಿದ್ದರೆ, ಗೋಡೆ ಶಿಥಿಲವಾಗಿದ್ದರೆ ರೋಗಿಗಳನ್ನು ಸ್ಥಳಾಂತರಿಸಬೇಕು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಶಿಥಿಲ ಕಟ್ಟಡದಿಂದ ಸ್ಥಳಾಂತರಿಸಿ’

‘ಅಂಗನವಾಡಿ, ಸರ್ಕಾರಿ ಶಾಲೆ ಮತ್ತು ಕಾಲೇಜು ಕಟ್ಟಡಗಳ ಚಾವಣಿಯಲ್ಲಿ ಸೋರಿಕೆ ಆಗುತ್ತಿದ್ದರೆ, ಕೊಠಡಿ ಅಥವಾ ಕಟ್ಟಡ ಶಿಥಿಲವಾಗಿದ್ದರೆ ಕೂಡಲೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಮಗ್ರ ಮಾಹಿತಿ ತರಿಸಿಕೊಂಡು ವರದಿ ಸಲ್ಲಿಸಬೇಕು. ಯಾವುದಾದರೂ ಶಾಲೆಯಲ್ಲಿ ದುರಂತ ಸಂಭವಿಸಿದರೆ ಸಂಬಂಧಿತ ಶಾಲಾ ಶಿಕ್ಷಣ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.