ಕಮಲನಗರ: ‘ಅಂಗದ ಮೇಲೆ ಲಿಂಗವುಳ್ಳವರನ್ನು ಸಂಗಮನಾಥನೆಂಬ ಉದಂತ್ತ ಚಿಂತನೆ ಹೊಂದಿರುವ ಬಸವಾದಿ ಪ್ರಮಥರು ಜಾತಿ, ವರ್ಗ ವರ್ಣವೆನ್ನದೆ ಬದುಕು ಪರಿಶುದ್ಧತೆಗೆ ಆದ್ಯತೆ ನೀಡಿದರು’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲ್ಲೂಕಿನ ನಿಡೋದಾ ಗ್ರಾಮದಲ್ಲಿ ಒಂದು ತಿಂಗಳ ಪರ್ಯಂತ ಜರುಗಿದ ಮನೆಗೊಂದು ಬಸವ ಜ್ಯೋತಿ ಕಾರ್ಯಕ್ರಮದ ಸಮಾರೋಪದ ನಿಮಿತ್ತ ಹಮ್ಮಿಕೊಂಡ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೀವನದಲ್ಲಿ ಶಾಂತಿ ಸಮಾಧಾನ ಸಹಬಾಳ್ವೆ ನೆಲೆಗೊಳ್ಳಲು ನೆಮ್ಮದಿ ಮುಖ್ಯ. ಅಂತಹ ನೆಮ್ಮದಿ ಸಂತೃಪ್ತಿ ಪಡೆಯಬೇಕೆಂದರೆ ಇಷ್ಟಲಿಂಗ ದೀಕ್ಷೆ ಮೂಲ ಸಾಧನವಾಗುತ್ತದೆ. ಜೀವನ ಪರಿಶುದ್ಧಗೊಳಿಸಿಕೊಳ್ಳಲು ಪ್ರೇರಿತ ಶಕ್ತಿಯಾಗುತ್ತದೆ’ ಎಂದರು.
‘108 ಜನ ದೀಕ್ಷೆ ಪಡೆಯುವುದರ ಮೂಲಕ ಬದುಕಿನ ಸಾರ್ಥಕತೆ ಮೆರೆದಿದ್ದಾರೆ. ದೀಕ್ಷೆ ಪಡೆಯುವ ಪ್ರೇರಣೆ ನೀಡಿದ ಪ್ರವಚನಕಾರರಾದ ಸುರೇಖಾ ಶಿವಶರಣಪ್ಪ ವಲ್ಲೆಪೂರೆಯವರ ಕಾರ್ಯ ಶ್ಲಾಘನೀಯವಾದದ್ದು. ದಂಪತಿ ಪ್ರವಚನ ನಡೆಸುವುದರ ಮೂಲಕ ಲಿಂಗ ದೀಕ್ಷೆಗೆ ಪ್ರೋತ್ಸಾಹ ನೀಡಿದ್ದಾರೆ’ ಎಂದು ಶ್ಲಾಘಿಸಿದರು.
ಮಾತೆ ಗಂಗಾದೇವಿ ಮಾತನಾಡಿ, ‘ದೀಕ್ಷೆ ಪಡೆಯುವುದರಿಂದ ನಮ್ಮ ಜೀವನದಲ್ಲಿ ಹೊಸ ಸಂಚಲನವನ್ನುಂಟು ಮಾಡುತ್ತದೆ. ನಮ್ಮೊಂದಿಗೆ ಶಾಶ್ವತವಾಗಿ ಬರುವುದು ಇಷ್ಟಲಿಂಗವೇ’ ಎಂದು ನುಡಿದರು.
ಮಹಾಲಿಂಗ ದೇವರು, ಪ್ರಭುಲಿಂಗದೇವರು, ಸುರೇಖಾ ವಲ್ಲೆಪೂರೆ, ಶಿವಶರಣಪ್ಪ ವಲ್ಲೆಪೂರೆ, ಮಹೇಶ ಪಾಟೀಲ, ನೌನಾಥ ತಡಕಲೆ, ಸಂಜೀವಕುಮಾರ ಜುಮ್ಮಾ, ಧನರಾಜ ಕ್ಯಾದಪ್ಪ, ಸಿದ್ದಪ್ಪ ಕಲ್ಯಾಣೆ, ನಾಗನಾಥ ಸ್ವಾಮಿ, ವೈಜಿನಾಥ ಖೇಳಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.