ADVERTISEMENT

ಬೀದರ್‌: ಸಾಗರ್‌ ಖಂಡ್ರೆ ₹13.12 ಕೋಟಿ ಒಡೆಯ

26ನೇ ವಯಸ್ಸಿನಲ್ಲೇ ₹12.86 ಕೋಟಿ ಸ್ಥಿರ, ₹57.26 ಲಕ್ಷ ಚರಾಸ್ತಿ; ಇಲ್ಲ ಸ್ವಂತ ವಾಹನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 15:41 IST
Last Updated 16 ಏಪ್ರಿಲ್ 2024, 15:41 IST
ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆಯವರು ಬೀದರ್‌ನ ಚುನಾವಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿ ಹೊರಬಂದರು. ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ ಹಾಗೂ ಇತರರು ಹಾಜರಿದ್ದರು
ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆಯವರು ಬೀದರ್‌ನ ಚುನಾವಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿ ಹೊರಬಂದರು. ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ ಹಾಗೂ ಇತರರು ಹಾಜರಿದ್ದರು   

ಬೀದರ್‌: ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆಯವರಿಗೆ ಈಗ 26 ವರ್ಷ ವಯಸ್ಸು. ಈ ಕಿರಿಯ ವಯಸ್ಸಿನಲ್ಲೇ ₹13.12 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.

ನಗರದಲ್ಲಿ ಮಂಗಳವಾರ ಚುನಾವಣಾಧಿಕಾರಿಗೆ ಅವರು ಸಲ್ಲಿಸಿರುವ ನಾಮಪತ್ರದೊಂದಿಗೆ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ.

₹12.86 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಬೆಂಗಳೂರಿನ ಅಲಿ ಅಸ್ಕರ್‌ ರಸ್ತೆಯಲ್ಲಿ ಅಪಾರ್ಟ್‌ಮೆಂಟ್‌, ಭಾಲ್ಕಿ, ಬೀದರ್‌ ತಾಲ್ಲೂಕಿನ ಹಮಿಲಾಪುರದಲ್ಲಿ ಕೃಷಿ ಹಾಗೂ ಕೃಷಿಯೇತರ ಜಮೀನು ಇವರ ಹೆಸರಿನಲ್ಲಿದೆ.

ADVERTISEMENT

₹57.26 ಲಕ್ಷ ಚರಾಸ್ತಿ ಹೊಂದಿದ್ದಾರೆ. ಇವರ ಬಳಿ ₹2.50 ಲಕ್ಷ ನಗದು ಇದೆ. ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ₹26.36 ಲಕ್ಷ ಠೇವಣಿ ಇಟ್ಟಿದ್ದಾರೆ. ಬೆಂಗಳೂರಿನ ಲ್ಯಾಂಡ್‌ ಟು ರೂಫ್‌ ಇನ್‌ಫ್ರಾ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಶೇ 50ರಷ್ಟು ಷೇರುಗಳು ಇವರ ಹೆಸರಿನಲ್ಲಿವೆ. ₹28 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದು, ಕುಟುಂಬ ಸದಸ್ಯರು ಹಾಗೂ ಇತರರು ಬೇರೆ ಬೇರೆ ಸಂದರ್ಭಗಳಲ್ಲಿ ಇವರಿಗೆ ನೀಡಿದ್ದಾರೆ. ಅಪಾರ ಆಸ್ತಿ ಹೊಂದಿರುವ ಇವರ ಬಳಿ ಯಾವುದೇ ವಾಹನ ಇಲ್ಲ.

2023–24ನೇ ಸಾಲಿನಲ್ಲಿ ಆದಾಯ ತೆರಿಗೆ ವಿವರ ಇನ್ನೂ ಸಲ್ಲಿಸಿಲ್ಲ. 2022–23ನೇ ಸಾಲಿನಲ್ಲಿ ₹25.92 ಲಕ್ಷ ಆಸ್ತಿ ಘೋಷಿಸಿಕೊಂಡಿದ್ದರು.

ಭಾಲ್ಕಿಯ ಖಂಡ್ರೆ ಗಲ್ಲಿ ನಿವಾಸಿಯಾಗಿರುವ ಸಾಗರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆಯವರ ಮಗ. ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಬಿಬಿಎ, ಎಲ್‌ಎಲ್‌ಬಿ ಪದವಿ ಪೂರೈಸಿದ್ದಾರೆ. ಇವರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ. ಇನ್ನೂ ಅವಿವಾಹಿತರು.

ಬೀದರ್‌ ಸಾಮಾನ್ಯ ಲೋಕಸಭಾ ಕ್ಷೇತ್ರ ಅಭ್ಯರ್ಥಿ
ಹೆಸರು; ಸಾಗರ್‌ ಖಂಡ್ರೆ ಪಕ್ಷ; ಕಾಂಗ್ರೆಸ್‌ ಒಟ್ಟು ಆಸ್ತಿ ಮೌಲ್ಯ; ₹13.12 ಕೋಟಿ ನಗದು; ₹2.50 ಲಕ್ಷ ಒಟ್ಟು ಚರಾಸ್ತಿ; ₹57.26 ಲಕ್ಷ ಸ್ಥಿರಾಸ್ತಿ; ₹12.86 ಕೋಟಿ ವಾಹನ; ಇಲ್ಲ ಚಿನ್ನ; ₹28 ಲಕ್ಷ ಮೌಲ್ಯದ ಚಿನ್ನಾಭರಣ ಸಾಲ; ₹1.50 ಕೋಟಿ ಕೈ ಸಾಲ ಅಪರಾಧ ಪ್ರಕರಣ; ಇಲ್ಲ ಹೆಂಡತಿ: ಅವಿವಾಹಿತ
ಇಂದು ಶಕ್ತಿ ಪ್ರದರ್ಶನ
ಸಾಗರ್‌ ಖಂಡ್ರೆಯವರು ಮಂಗಳವಾರ ಬೀದರ್‌ನಲ್ಲಿ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಸಿದರು. ಬುಧವಾರ (ಏ.17) ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನದೊಂದಿಗೆ ಇನ್ನೊಂದು ನಾಮಪತ್ರ ಸಲ್ಲಿಸುವರು. ಸಚಿವರಾದ ಈಶ್ವರ ಬಿ.ಖಂಡ್ರೆ ರಹೀಂ ಖಾನ್‌ ಪಕ್ಷದ ಶಾಸಕರು ಮುಖಂಡರು ಅಪಾರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಬಸವೇಶ್ವರ ವೃತ್ತದಿಂದ ರೋಡ್‌ ಶೋ ಆರಂಭವಾಗಲಿದೆ. ಮಧ್ಯಾಹ್ನ 12ಕ್ಕೆ ಗಣೇಶ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಾಗರ್ ಖಂಡ್ರೆ ನಾಮಪತ್ರ ಸಲ್ಲಿಕೆ
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆಯವರ ಮಗ ಸಾಗರ್ ಖಂಡ್ರೆ ಅವರು ನಗರದಲ್ಲಿ ಮಂಗಳವಾರ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ತಾಯಿ ಡಾ.ಗೀತಾ ಈಶ್ವರ ಖಂಡ್ರೆ ಮಾವ ಗಂಗಾಧರ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರೊಂದಿಗೆ ತೆರಳಿ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಉಮೇದುವಾರಿಕೆ ಸಲ್ಲಿಸಿ ಪ್ರತಿಜ್ಞೆ ಸ್ವೀಕರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.