ಬಂಧನ
ಬೀದರ್: ಜಿಲ್ಲೆಗೆ ಮಾದಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ನೆರೆಯ ತೆಲಂಗಾಣ ರಾಜ್ಯದ ಸಂಗಾರೆಡ್ಡಿಯಲ್ಲಿ ಜಿಲ್ಲೆಯ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.
ಸಂಗಾರೆಡ್ಡಿ ಜಿಲ್ಲೆಯ ರಾಮಚಂದ್ರಪುರದ ಜಗದೀಶ್ವರ ಮೆಡಿಕಲ್ ಸ್ಟೋರ್ನ ಮಾಲೀಕ ಮೇದಿಶೆಟ್ಟಿ ಪ್ರಸಾದ್ ಜನಾರ್ದನ ಬಂಧಿತ. ಈತನ ಬಳಿಯಿಂದ ₹1.80 ಲಕ್ಷ ಮೌಲ್ಯದ ನಶೆ ಏರಿಸುವ ಗುಳಿಗೆ, ಸಿರಪ್ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಶನಿವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಗರದ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ದೀನ ದಯಾಳ್ ನಗರದ ವಿಕಾಸ ಈಶ್ವರ ಕಸಬೆ ಹಾಗೂ ಆತನ ಸಹೋದರ ಸುದೇಶ ಈಶ್ವರ ಕಸಬೆಯನ್ನು ಆಗಸ್ಟ್ 21ರಂದು ಮಾದಕ ವಸ್ತುಗಳೊಂದಿಗೆ ಬಂಧಿಸಲಾಗಿತ್ತು. ಮೇದಿಶೆಟ್ಟಿ ಪ್ರಸಾದ್ ಎಂಬಾತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಮಾಹಿತಿ ಕೊಟ್ಟಿದ್ದರು. ಅವರ ಮಾಹಿತಿ ಆಧರಿಸಿ ಸಿಪಿಐ ಪಾಲಾಕ್ಷಯ್ಯ, ಪಿಎಸ್ಐ ಗಿರಿಗೌಡರ, ಸಿಬ್ಬಂದಿ ನಾರಾಯಣ, ಸಿದ್ರಾಮ, ಈರಾರೆಡ್ಡಿ, ಆರೀಫ್, ಕಮಲಾಕರ, ಶಿವರಾಜ, ಮುತ್ತಣ್ಣ ಅವರಿದ್ದ ತಂಡವು ಕಾರ್ಯಾಚರಣೆ ನಡೆಸಿ, ಮೇದಿಶೆಟ್ಟಿಯನ್ನು ಮಾದಕ ವಸ್ತುಗಳ ಸಮೇತ ವಶಕ್ಕೆ ಪಡೆದಿದ್ದಾರೆ. ವೈದ್ಯರ ಸಲಹೆ ಇಲ್ಲದೆ ಅನಧಿಕೃತವಾಗಿ ಗುಳಿಗೆ, ಸಿರಪ್ ಮಾರಾಟ ಮಾಡುತ್ತಿದ್ದರು. ನಶೆಗಾಗಿ ಈ ವಸ್ತುಗಳನ್ನು ಬಳಸಲಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.