
ಬೀದರ್: ‘ಬೀದರ್ ಜಿಲ್ಲೆ ಅನೇಕ ಸ್ಮಾರಕಗಳನ್ನು ಒಳಗೊಂಡಿರುವ ಸಾಮರಸ್ಯದ ನೆಲೆಬೀಡು’ ಎಂದು ಸಂಶೋಧಕ ಸಂತೋಷ್ ಹಾನಗಲ್ ತಿಳಿಸಿದರು.
ಪುಸ್ತಕ ಸಂತೆಯ ಅಂಗವಾಗಿ ನಗರದ ಸಾಯಿ ಶಾಲೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಬೀದರ್ ಜಿಲ್ಲೆಯ ಸ್ಮಾರಕಗಳು’ ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿದ್ರಿ ಕಲೆ, ಬೀದರ್ ಕೋಟೆ, ಗುರುದ್ವಾರ, ಕರೇಜ್, ಬಹಮನಿ ಕೋಟೆ, ಬರೀದ್ ಷಾಹಿ ಗೋರಿಗಳು, ನರಸಿಂಹ ಝರಣಿ ಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ಕೋಟೆ ಕೊತ್ತಲಗಳು ಜಿಲ್ಲೆಯಲ್ಲಿವೆ. ಇವುಗಳ ಸಂರಕ್ಷಣೆ ಸರ್ಕಾರದ ಜೊತೆ ಜೊತೆಗೆ ಸಾರ್ವಜನಿಕರದ್ದು ಆಗಿದೆ ಎಂದು ಹೇಳಿದರು.
ಸ್ಮಾರಕಗಳು ನಮ್ಮ ಗತಕಾಲದ ವೈಭವದ ಪ್ರತೀಕ. ನಾಡಿಮಿಡಿತ ಕೂಡ ಎನ್ನಬಹುದು. ಸಾಂಸ್ಕೃತಿಕ, ಐತಿಹಾಸಿಕ ಸಾಕ್ಷ್ಯಗಳು ಹೌದು. ಹೀಗಾಗಿ ಈ ಜೀವಂತ ಪಳೆಯುಳಿಕೆಗಳನ್ನು ಸಂರಕ್ಷಿಸಿ, ಅವುಗಳ ಮಹತ್ವ ಸಾರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ನಾವು ಗೊಂದಲದಲ್ಲಿ ಇತಿಹಾಸ ನೋಡುವಂತಹ ಸಂದರ್ಭದಲ್ಲಿದ್ದೇವೆ. ಅನುಭವ ಮಂಟಪ ಸ್ಮಾರಕವೋ ಅಥವಾ ಧಾರ್ಮಿಕ ಕೇಂದ್ರವೋ? ಸರ್ಕಾರ ಈ ಸ್ಥಳ ಸ್ಮಾರಕಗಳ ಪಟ್ಟಿಯಲ್ಲೇಕೆ ಸೇರಿಸಿಲ್ಲ ಎಂಬ ಪ್ರಶ್ನೆ ಮೂಡಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಕೊನೆಯ ಭಾಷಣದಲ್ಲಿ ಅನುಭವ ಮಂಟಪದ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗ ಡೆಂಗಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಶಿವಕುಮಾರ ಉಪ್ಪೆ, ರಾಜಕುಮಾರ ಅಲ್ಲೂರೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.