
ಬೀದರ್: ಮನರೇಗಾ ಕೇವಲ ಕಾಗದಕ್ಕೆ ಸೀಮಿತವಾಗಿತ್ತು. ಗಾಂಧೀಜಿ ಅವರ ರಾಮರಾಜ್ಯದ ಕನಸು ನನಸು ಮಾಡಲು ವಿಬಿ–ಜಿ ರಾಮ್ ಜಿ ಜಾರಿಗೊಳಿಸಲಾಗಿದೆ’ ಎಂದು ವಿಧಾನ ಪರಿಷತ್ನ ವಿರೋಧಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಪಕ್ಷಗಳು ಗಾಂಧಿಜಿಯವರ ಹೆಸರು ತೆಗೆದು ಹಾಕಿದೆ ಎಂದು ಟೀಕಿಸುತ್ತಿದೆ. ಆದರೆ ಗಾಂಧಿಜಿ ಸದಾ ರಾಮರಾಜ್ಯದ ಕನಸು ಕಾಣುತ್ತಿದ್ದರು. ಅವರ ಆರಾದ್ಯದೈವ ಪ್ರಭು ಶ್ರೀರಾಮ. ಹಾಗಾಗಿ ಪ್ರಧಾನಿ ಮೋದಿಜಿಯವರು ರಾಮನ ಹೆಸರನ್ನು ಇಟ್ಟು ಗಾಂಧಿಜಿಯವರ ಸಂಕಲ್ಪ ಪೂರ್ಣ ಮಾಡಲು ಮುಂದಾಗಿದ್ದಾರೆ’ ಎಂದರು.
‘100 ದಿನ ಇದ್ದ ಕೆಲಸದ ದಿನಗಳನ್ನು 125ಕ್ಕೆ ಏರಿಸಲಾಗಿದೆ. ಇದರಿಂದ ಉದ್ಯೋಗ ದಿನ ಹೆಚ್ಚಾಗಿದ್ದು, ಕೂಲಿಕಾರರ ಆರ್ಥಿಕ ಮಟ್ಟ ಸುಧಾರಿಸಲು ಸಾಧ್ಯವಾಗಲಿದೆ. ಕೃಷಿ ಸಮಯದಲ್ಲಿ 60 ದಿನಗಳ ಕಾಲ ಯೋಜನೆ ನಿಲ್ಲಿಸುವ ಮೂಲಕ ಹಳ್ಳಿಗಳಲ್ಲಿನ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಮನರೆಗಾದಲ್ಲಿ ಒಂದು ತಿಂಗಳಿಗೊಮ್ಮೆ ಕೂಲಿ ನೀಡಲಾಗುತ್ತಿತ್ತು. ಈ ಯೋಜನೆಯಿಂದ 15 ದಿನಕ್ಕೊಮ್ಮೆ ಕೂಲಿ ನೀಡುತ್ತದೆ’ ಎಂದರು.
‘ನಕಲಿ ಕಾರ್ಡ್, ಹಣದ ಸೋರಿಕೆ ತಡೆಯಲು ಎಐ ತಂತ್ರಜ್ಞಾನ ಬಳಿಸಿ ಅದರ ಕಣ್ಗಾವಲಿನಲ್ಲಿ ಯೋಜನೆ ಸುರಕ್ಷಿತವಾಗಿರಲಿದೆ. ಮೊದಲು ₹11,300 ಕೋಟಿ ಇದ್ದ ಹಣವನ್ನು ₹86,000 ಕೋಟಿಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ರಸ್ತೆಗಳು, ಒಳ ಚರಂಡಿ, ಸಮುದಾಯ ಭವನ ನಿರ್ಮಾಣ, ಕೆರೆಗಳ ಹೂಳೆತ್ತುವಿಕೆ, ಹೊಸ ಕೆರೆಗಳ ನಿರ್ಮಾಣ ಸೇರಿದಂತೆ ಗ್ರಾಮೀಣ ವಿಕಾಸಕ್ಕೆ ಅನುಕೂಲವಾಗಲಿದೆ’ ಎಂದರು.
‘ಸ್ಥಳೀಯವಾಗಿ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಆರ್ಥಿಕ ಸುಭಿಕ್ಷೆ ದೊರೆಯಲಿದೆ. 2047ರ ವಿಕಸಿತ ಭಾರತದ ಹಾದಿ ಸುಗಮಗೊಳಿಸಲಿದೆ ಎಂಬುದನ್ನು ಸಿದ್ಧರಾಮಯ್ಯ ಹಾಗೂ ಡಿ.ಕೆ ಶಿವಕುಮಾರ ಅರ್ಥ ಮಾಡಿಕೊಳ್ಳಬೇಕು’ ಎಂದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಪಾಲಿಕೆ ಸದಸ್ಯ ಶಶಿ ಹೊಸಳ್ಳಿ, ಬಸವರಾಜ ಪವಾರ, ರಾಜಕುಮಾರ ನೆಮತಾಬಾದ್, ಸುಭಾಷ ಮಡಿವಾಳ, ಬಾಬುರಾವ ಮಲ್ಕಾಪುರೆ, ಶ್ರೀನಿವಾಸ ಚೌಧರಿ ಸೇರಿದಂತೆ ಇತರರು ಇದ್ದರು.
[
ಬೀದರ್: ಶಾಸಕ ಸಿದ್ದಲಿಂಗಪ್ಪ ಪಾಟೀಲ ಅವರ ಮೇಲೆ ಅವಾಚ್ಯ ಶಬ್ಧ ಬಳಸಿ, ಹಲ್ಲೆಗೆ ಯತ್ನಿಸಿದ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಹಾಗೂ ಅವರ ಸಹೋದರ ಡಾ.ಚಂದ್ರಶೇಖರ್ ಪಾಟೀಲ ಅವರ ಮೇಲೆ ರಾಜ್ಯ ಸರ್ಕಾರ ಸುಮೊಟೊ ಕೇಸ್ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಮನಾಬಾದ್ನಲ್ಲಿ ಅಕ್ರಮ ಲೇಔಟ್ ಧಂದೆ ನಡೆಯುತ್ತಿದ್ದು, ಅದನ್ನು ತಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಸಿದ್ದಲಿಂಗಪ್ಪ ಪಾಟೀಲ ಅವರು ಹೇಳುವಾಗ ವಿಪ ಸದಸ್ಯ ಭೀಮರಾವ್ ಪಾಟೀಲ ಹಾಗೂ ಅವರ ಸಹೋದರ ಡಾ.ಚಂದ್ರಶೇಖರ್ ಪಾಟೀಲ ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದ್ದು ನಾಚಿಕೆಗೇಡಿನ ಸಂಗತಿ ಎಂದರು.
ಹುಮನಾಬಾದ್: ‘ಪೊಲೀಸರು ಮಧ್ಯ ಪ್ರವೇಶಿಸದಿದ್ದರೆ ಶಾಸಕರ ಮೇಲೆ ಹಲ್ಲೆ ನಡೆದಿರುತ್ತಿತ್ತು’ ಎಂದು ವಿಧಾನ ಪರಿಷತ್ನ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.
ಪಟ್ಟಣದಲಿ ಗುರುವಾರ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳ ಮುಂದೆ ಈ ರೀತಿ ಘಟನೆ ನಡೆದರೂ, ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ’ ಎಂದರು.
ಘಟನೆಗೆ ಸಂಬಂಧಿಸಿದಂತೆ ತಕ್ಷಣ ಪ್ರಕರಣ ದಾಖಲಿಸಬೇಕು. ಇಲ್ಲದ್ದರೆ ಪಕ್ಷದಿಂದ ಜ.12ರಂದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಳ್ಳಾರಿಯಲ್ಲಿ ಬಿಜೆಪಿ ಶಾಸಕರ ಮನೆ ಮುಂದೆ ಕಾಂಗ್ರೆಸ್ ಪಕ್ಷದ ನಾಯಕರ ಬ್ಯಾನರ್ ಹಾಕಿ ಅಪಮಾನ ಮಾಡುವುದು, ಬೀದರ್ನಲ್ಲಿ ಶಾಸಕ ಸಿದ್ದಲಿಂಗಪ್ಪ ಪಾಟೀಲ ಮೇಲೆ ಹಲ್ಲೆಗೆ ಮುಂದಾಗಿರುವುದು, ಹುಬ್ಬಳ್ಳಿಯಲ್ಲಿನ ಘಟನೆಗಳು ಸರ್ಕಾರದ ಕಣ್ಣಿನ ಮುಂದೆ ಕಾಣುವ ರೀತಿಯಲ್ಲಿ ನಡೆದರು ಯಾವುದೇ ಕ್ರಮ ಜರುಗಿಸಿಲ್ಲ’ಎಂದರು.
ಹುಮನಾಬಾದ್ ಆರ್ಟಿಒ ಚಕ್ಪೋಸ್ಟ್ ಹೆಸರಿನಲ್ಲಿ ಹಣ ಲೋಟಿ, ಅಕ್ಕಿ ಸಾಗಾಟ, ಗಾಂಜಾ ಸಾಗಾಟ, ಮರಳು ಧಂದೆ, ಪ್ರತಿ ಪಕ್ಷದವರ ಸ್ವಾತಂತ್ರ್ಯ ಭಂಗ ಮಾಡುವ ಘಟನೆಗಳು ಬೀದರ್ನಲ್ಲಿ ನಡೆಯುತ್ತಿವೆ. ಈ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ, ಬಸವರಾಜ ಆರ್ಯ, ಸಂತೋಷ್ ಪಾಟೀಲ, ಸುನೀಲ ಪಾಟೀಲ, ಆನೀಲ ಪಸರಗಿ, ವಿಶ್ವನಾಥ್ ಪಾಟೀಲ , ರವಿ ಹೊಸಳ್ಳಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.