ಜನವಾಡ: ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದ ರುದ್ರಮುನೀಶ್ವರ ಸಂಸ್ಥಾನ ಮಠದ ಪೀಠಾಧಿಪತಿ ರುದ್ರಮುನಿ ಪಟ್ಟದ್ದೇವರು (86) ಗುರುವಾರ ನಿಧನರಾದರು.
ಜಿಲ್ಲೆಯ ಮಠಾಧೀಶರು, ಗಣ್ಯರು ಹಾಗೂ ವಿವಿಧೆಡೆಯ ಅಪಾರ ಭಕ್ತ ಸಮೂಹದ ಮಧ್ಯೆ ವೀರಶೈವ ಲಿಂಗಾಯತ ವಿಧಿ ವಿಧಾನದ ಪ್ರಕಾರ ಸಂಜೆ ಅವರ ಅಂತ್ಯಕ್ರಿಯೆ ನಡೆಯಿತು.
‘ರುದ್ರಮುನಿ ಪಟ್ಟದ್ದೇವರು ನಿರಂತರ ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮಠದ ಅಡಿಯಲ್ಲಿನ ಶಾಲೆ ಹಾಗೂ ವಸತಿ ನಿಲಯದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಿದ್ದರು. ಭಕ್ತರಿಗೆ ಸನ್ಮಾರ್ಗ ತೋರಿದ್ದರು’ ಎಂದು ಭಕ್ತರು ಸ್ಮರಿಸಿದರು.
ಕೇಂದ್ರ ಸಚಿವ ಭಗವಂತ ಖೂಬಾ ಅವರು ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಬೀದರ್ನ ಬಸವ ಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ, ಹಿರೆನಾಗಾಂವ್ನ ಜಯಶಾಂತಲಿಂಗೇಶ್ವರ ಶಿವಾಚಾರ್ಯ, ಹಲಬರ್ಗಾದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಹೆಡಗಾಪುರದ ಶಿವಲಿಂಗ ಶಿವಾಚಾರ್ಯ, ಯದಲಾಪುರದ ಶಂಕರಲಿಂಗ ಶಿವಾಚಾರ್ಯ, ಸೊಂತದ ಶಂಕರಲಿಂಗ ಶಿವಾಚಾರ್ಯ, ಪ್ರಮುಖರಾದ ಶ್ರೀಮಂತ ಪಾಟೀಲ, ಶಿವನಾಥ ಕತ್ತೆ ಮೊದಲಾದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
63 ವರ್ಷ ಮಠ ಮುನ್ನಡೆಸಿದ್ದ ಶ್ರೀಗಳು: ರುದ್ರಮುನಿ ಪಟ್ಟದ್ದೇವರು 63 ವರ್ಷ ಚಾಂಬೋಳ್ ಗ್ರಾಮದ ರುದ್ರಮುನೀಶ್ವರ ಸಂಸ್ಥಾನ ಮಠವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. 1961 ರಲ್ಲಿ ಅವರು ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದರು. 1963 ರಲ್ಲಿ ಪೀಠಾಧಿಪತಿ ಸ್ಥಾನ ಅಲಂಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.