ADVERTISEMENT

ಕಬ್ಬಿನ ಬಾಕಿ ಪಾವತಿಗೆ ಆಗ್ರಹ

ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಖರೀದಿಯಲ್ಲೂ ತಾರತಮ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 15:29 IST
Last Updated 2 ಮಾರ್ಚ್ 2020, 15:29 IST
ಬೀದರ್‌ನಲ್ಲಿ ಸೋಮವಾರ ನಡೆದ ರೈತ ಸಂಘದ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು
ಬೀದರ್‌ನಲ್ಲಿ ಸೋಮವಾರ ನಡೆದ ರೈತ ಸಂಘದ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು   

ಬೀದರ್: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸುತ್ತಿರುವ ನೆರೆ ಜಿಲ್ಲೆಗಳ ರೈತರಿಗೆ ಪ್ರತಿ ಟನ್‌ಗೆ ₹ 2,400ರಿಂದ ₹ 2,600 ಬಿಲ್ ಪಾವತಿಸುತ್ತಿದ್ದರೆ, ಸ್ಥಳೀಯ ರೈತರಿಗೆ ಕೇವಲ ₹ 2,250 ಕೊಟ್ಟು ಅನ್ಯಾಯ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ನಗರದ ಗಾಂಧಿ ಗಂಜ್‌ನಲ್ಲಿರುವ ರೈತ ಭವನದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಜಿಲ್ಲಾ ಘಟಕದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ನೀತಿಗೆ ರೈತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ರೈತರಿಂದಲೇ ಸಕ್ಕರೆ ಕಾರ್ಖಾನೆಗಳು ನಡೆಯುತ್ತಿವೆ. ಆದರೆ, ಆಡಳಿತ ಮಂಡಳಿಗಳು ರೈತರನ್ನು ಕತ್ತಲಲ್ಲಿ ಇಟ್ಟು ನೆರೆ ಜಿಲ್ಲೆಗಳ  ರೈತರ ಕಬ್ಬು ತರಿಸುತ್ತಿವೆ. ಈ ಮೂಲಕ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.
ಕೆಲ ಕಾರ್ಖಾನೆಗಳು ರೈತರಿಗೆ ಕಬ್ಬಿನ ಬಾಕಿ ನೀಡದೆ ಮೋಸ ಮಾಡಿವೆ. ಬೇರೆ ಜಿಲ್ಲೆಯ ರೈತರಿಗೆ ನಗದು ಹಣ ಪಾವತಿಸುತ್ತಿವೆ. ಜಿಲ್ಲೆಯ ರೈತರ ಕಬ್ಬನ್ನು ಮೊದಲು ನುರಿಸಬೇಕು. ಕಬ್ಬು ಸರಬರಾಜು ಮಾಡಿದ ರೈತರಿಗೆ 15 ದಿನಗಳೊಳಗೆ ಹಣ ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಬೀದರ್‌ ತಾಲ್ಲೂಕಿನ ಕಮಠಾಣ ಸಮೀಪ ನಡೆದ ಪಶು ಮೇಳದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿ ರೈತರಿಂದ ತಲಾ 20 ಕ್ವಿಂಟಲ್‌ ತೊಗರಿ ಖರೀದಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ, ಈವರೆಗೂ ಅಧಿಕಾರಿಗಳು ತೊಗರಿ ಖರೀದಿ ಮಾಡುತ್ತಿಲ್ಲ. ರೈತರಿಗೆ ಸುಳ್ಳು ಭರವಸೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಮಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿರುವುದು ಸ್ವಾಗತಾರ್ಹ. ಆದರೆ, ಈ ಅವಧಿಯನ್ನು ಮಾರ್ಚ್ 31ರ ವರೆಗೆ ಮಾತ್ರ ನಿಗದಿ ಮಾಡಿರುವುದು ಸರಿಯಲ್ಲ. ಬರಗಾಲ, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಬೆಳೆ ಬರುವ ವರೆಗಾದರೂ ಸಮಯಾವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಸಿದ್ರಾಮಪ್ಪ ಆಣದೂರೆ, ಶ್ರೀಮಂತ ಬಿರಾದಾರ, ಪ್ರಕಾಶ ಬಾವಗೆ, ಕಾಸಿಂ ಅಲಿ, ವಿಠ್ಠಲ್ ರೆಡ್ಡಿ ಆಣದೂರ, ವೀರಪಣ್ಣ ದುಬಲಗುಂಡಿ, ಬಾಬುರಾವ್ ಜೋಳದಾಪಕಾ, ಬಸವರಾಜ ಅಷ್ಟೂರ ಸಭೆಯಲ್ಲಿ ಇದ್ದರು.

ಮಾರ್ಚ್ 16ರಂದು ರೈತ ಸಂಘದ ಸಭೆ: ರೈತ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಸಭೆ ಮಾರ್ಚ್ 16ರಂದು ನಗರದ ಗಾಂಧಿ ಗಂಜ್‌ನ ರೈತ ಭವನದಲ್ಲಿ ನಡೆಯಲಿದೆ.

ಸಭೆಯಲ್ಲಿ ಸಂಘದ ಬಲವರ್ಧನೆ, ಸಭೆಗೆ ನಿರಂತರವಾಗಿ ಗೈರಾದವರನ್ನು ಸಂಘದ ಪ್ರಮುಖ ಹುದ್ದೆಗಳಿಂದ ಕೈಬಿಡುವ ಕುರಿತು ಚರ್ಚೆ ನಡೆಸಲಾಗುವುದು. ಸಂಘದ ಪದಾಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.