
ಬೀದರ್: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ವತಿಯಿಂದ 90ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ವ್ಯಸನಮುಕ್ತ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಗುರುವಾರ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರತಿಯೊಬ್ಬ ಭಾರತೀಯ ಆರೋಗ್ಯವಂತನಾಗಿರಬೇಕು. ಭಾರತ ಶಕ್ತಿಶಾಲಿ ಹಾಗೂ ಸ್ವಾವಲಂಬಿ ರಾಷ್ಟ್ರವಾಗಿ ಬೆಳೆಯಬೇಕು. ಜಗತ್ತಿಗೆ ಮಾರ್ಗದರ್ಶಿಯಾಗುವ ವಿಶ್ವಗುರು ಭಾರತವನ್ನು ರೂಪಿಸಬೇಕು. ಎಲ್ಲರೂ ಒಟ್ಟಾಗಿ ಶ್ರಮಿಸಿದರೆ 2047ರ ವೇಳೆಗೆ ಭಾರತವನ್ನು ನಿಜವಾದ ಸೂಪರ್ ಪವರ್ ಆಗಿ ರೂಪಿಸುವುದು ಸಾಧ್ಯ ಎಂದು ಹೇಳಿದರು.
ನವದೆಹಲಿಯ ರಾಜಯೋಗಿ ಬಿ.ಕೆ. ಪಿಯೂಷ್ ಭಾಯ್ ಮಾತನಾಡಿ, ಸಮಾಜವನ್ನು ನಶೆಮುಕ್ತಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾರಿ ಲಕ್ಷ್ಮಿಯಾಗಬೇಕು, ನರ ನಾರಾಯಣನಾಗಬೇಕು. ನಶೆ ತ್ಯಾಗದ ಮೂಲಕ ದುರ್ವ್ಯಸನಗಳಿಂದ ಮುಕ್ತರಾಗಿ ಶಾಂತ, ಸುಖಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಕೇಂದ್ರದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನಜೀ ಮಾತನಾಡಿ, ಸರ್ಕಾರ ಹಾಗೂ ವಿವಿಧ ರೋಟರಿ ಕ್ಲಬ್ಗಳ ಸಹಕಾರದಿಂದ ಜಾಗೃತಿ ಬಸ್ಗಳ ಮೂಲಕ ಅಭಿಯಾನದ ಸಂದೇಶವನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಅಭಿಯಾನದಿಂದ ಅನೇಕ ಕುಟುಂಬಗಳ ಜೀವನದಲ್ಲಿ ಶಾಂತಿ, ಸೌಹಾರ್ದ ಮತ್ತು ಸುಖ ಪುನಃ ಸ್ಥಾಪನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷೆ ಡಾ. ಗುರಮ್ಮ ಸಿದ್ಧಾರೆಡ್ಡಿ, ಬಿ.ಕೆ. ಮಂದಾಕಿನಿ, ಬಿ.ಕೆ. ಸುಮನ್, ಬಿ.ಕೆ ರಾಧಾ, ಬಿ.ಕೆ. ಪಾರ್ವತಿ ಇದ್ದರು. ಇದಕ್ಕೂ ಮುನ್ನ 12 ಕಾರುಗಳ ಮೇಲೆ 12 ಜ್ಯೋತಿರ್ಲಿಂಗಗಳ ಶೋಭಾಯಾತ್ರೆ ನಡೆಯತು. ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ. ಗುರುದೇವಿ ಬಹೆನಜೀ ಪ್ರಾಸ್ತಾವಿಕ ಭಾಷಣ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.