ಬೀದರ್: ಪದ್ಮಶ್ರೀ ಪುರಸ್ಕೃತರಾದ ಹೆಸರಾಂತ ಬಿದ್ರಿ ಕಲಾವಿದ ಷಾ ರಶೀದ್ ಅಹಮ್ಮದ್ ಖಾದ್ರಿ ಅವರು ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ವೆಚ್ಚ ಭರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವಾರಕ್ಕೆ ಮೂರು ದಿನ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದರು. ಕೆಲ ದಿನಗಳ ಹಿಂದೆ ಪುನಃ ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಆರೋಗ್ಯ ಬಹಳ ಕ್ಷೀಣಿಸಿದ್ದರಿಂದ ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ ಕಾರಣ ಈಚೆಗೆ ಹೈದರಾಬಾದ್ನ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಷಾ ರಶೀದ್ ಅಹಮ್ಮದ್ ಅವರನ್ನು ‘ಬಿದ್ರಿ ಮಾಸ್ಟರ್’ ಎಂದೇ ಗುರುತಿಸಲಾಗುತ್ತದೆ. ಈ ಕಲೆಯ ಮಹತ್ವವನ್ನು ಸಾಗರದಾಚೆಗೂ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದಕ್ಕಾಗಿಯೇ ಇವರಿಗೆ ಕೇಂದ್ರ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅನೇಕ ರಾಷ್ಟ್ರ, ರಾಜ್ಯ ಪ್ರಶಸ್ತಿಗಳೂ ಸಂದಿವೆ.
ಒಡಿಶಾ ತೆಲಂಗಾಣ ಮಾದರಿ ಅನುಸರಿಸಿ
ಪದ್ಮಶ್ರೀ ಪುರಸ್ಕೃತರಿಗೆ ಒಡಿಶಾ ತೆಲಂಗಾಣದಲ್ಲಿ ಅಲ್ಲಿನ ಸರ್ಕಾರ ₹25 ಲಕ್ಷ ನಗದು ನೀಡಿದೆ. ಪ್ರತಿ ತಿಂಗಳು ₹25 ಸಾವಿರ ಮಾಸಾಶನ ನೀಡುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ನನಗೂ ನೆರವು ನೀಡಿದರೆ ಆಸ್ಪತ್ರೆಯ ವೆಚ್ಚ ಭರಿಸಲು ಸಹಾಯವಾಗುತ್ತದೆ.
– ಷಾ ರಶೀದ್ ಅಹಮ್ಮದ್ ಖಾದ್ರಿ ಬಿದ್ರಿ
ಕಲಾವಿದ ಸರ್ಕಾರ ಸ್ಪಂದಿಸಿದರೆ ಬದುಕುಳಿಯುವರು
ನಮ್ಮ ತಂದೆಯ ಪರಿಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರ ಜಿಲ್ಲೆಯ ಸಚಿವರಿಗೆ ಪತ್ರ ಬರೆದು ವಿವರಿಸಿದ್ದೇನೆ. ಇದುವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸರ್ಕಾರ ಸ್ಪಂದಿಸಿದರೆ ನಮ್ಮ ತಂದೆ ಬದುಕುಳಿಯುತ್ತಾರೆ.
–ಫರ್ಹಾನ್ ಷಾ ರಶೀದ್ ಅಹಮ್ಮದ್ ಖಾದ್ರಿಯವರ ಹಿರಿಯ ಮಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.