
ಬೀದರ್: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಪ್ರಚಂಡ ಬಹುಮತದಿಂದ ಜಯ ಗಳಿಸಿರುವುದಕ್ಕೆ ಬಿಜೆಪಿ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಸಂತಸ ವ್ಯಕ್ತಪಡಿಸಿದ್ದಾರೆ.
ಬಿಹಾರ ರಾಜ್ಯ ಗೌತಮ ಬುದ್ಧನ ನಾಡು. ಅಲ್ಲಿನ ಜನರು ಸಹ ಅತ್ಯಂತ ಪ್ರಬುದ್ಧರು. ಮತದಾರರು ರಾಜ್ಯದ ಹಿತ, ದೇಶದ ಹಿತ, ರಾಜ್ಯದ ಸುರಕ್ಷತೆ, ದೇಶದ ಸುರಕ್ಷತೆ ಗಮನಿಸಿ ಎನ್ ಡಿಎಗೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಇದು ಹಿಂದುತ್ವ ಹಾಗೂ ವಿಕಾಸವಾದದ ಜಯವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆದ ಬೆಲ್ದಾಳೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ, ಜೆಡಿಯು, ಎಲ್ಜೆಪಿ ಜಯ ಚರಿತ್ರಾರ್ಹವಾಗಿದೆ. ಮೋದಿ ಹಾಗೂ ನಿತೀಶ್ ಅವರ ಜೋಡಿ ಮಹಾ ಮೋಡಿ ಮಾಡಿದೆ. 243 ಸ್ಥಾನಗಳಲ್ಲಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎನ್ಡಿಎಗೆ ನಿಚ್ಚಳ ಬಹುಮತದಿಂದ ಗೆಲ್ಲಿಸಿ, ಮಹಾ ಘಟಬಂಧನ್ ಪಕ್ಷಗಳ ಸಫಾಯ ಮಾಡಿದ್ದಾರೆ. ಬಿಹಾರ ಗೆಲುವು ಸರಳವಾಗಿ ವಿಶ್ಲೇಷಣೆ ಮಾಡಬಹುದಾದರೆ ಇದು ಹಿಂದುತ್ವದ ಗೆಲುವು ಹಾಗೂ ವಿಕಾಸವಾದದ ಗೆಲುವು ಎಂದಿದ್ದಾರೆ.
ಕಾಂಗ್ರೆಸ್ ಮುಳುಗುವ ದೋಣಿ. ಅದರೊಂದಿಗೆ ಹೋದವರು ಸಹ ಮುಳುಗುವುದು ಗ್ಯಾರಂಟಿ. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಆರ್ಜೆಡಿ ಹೀನಾಯ ಸೋಲು ಕಂಡಿದೆ. ಭವಿಷ್ಯದಲ್ಲಿ ಯಾರೂ ಕಾಂಗ್ರೆಸ್ ಜೊತೆಗೆ ಕೈಜೋಡಿಸುವುದಿಲ್ಲ. ಕಾಂಗ್ರೆಸ್ ಝಳಝಳವಾಗುವ ದಿನ ಹತ್ತಿರವಾಗಿವೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ಗೆ ಕಪಾಳಮೋಕ್ಷ
ಬಿಹಾರದ ಜನರು ಬಿಜೆಪಿಗೆ ಅಭೂತಪೂರ್ವ ಗೆಲುವನ್ನು ತಂದುಕೊಟ್ಟು ನರೇಂದ್ರ ಮೋದಿಯವರ ನಾಯಕತ್ವಕ್ಕೆ ಬಹುಪರಾಕ್ ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟವು ಮಾಡುತ್ತಿರುವ ವೋಟ್ ಚೋರಿ ಅಪಪ್ರಚಾರಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಹೇಳಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರ ದುರಾಡಳಿತ ಹೆಚ್ಚಾಗಿದೆ. ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಸರ್ಕಾರದ ವಿರುದ್ದ ಜನರು ತಿರುಗಿ ಬೀಳುತ್ತಿದ್ದಾರೆ. ಭ್ರಷ್ಟ ಸಚಿವರುಗಳಿಂದ ತುಂಬಿರುವ ಈ ಸರ್ಕಾರ 5 ವರ್ಷ ಅಧಿಕಾರ ಪೂರೈಸುವುದಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.