ಬೀದರ್: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರಿಗೆ ಅಗೌರವ ತೋರಿದ್ದಾರೆ ಹಾಗೂ ರೈತ ಮಹಿಳೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಂಸದ ಭಗವಂತ ಖೂಬಾ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ನೇತೃತ್ವದಲ್ಲಿ ಡಾ.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದ ವರೆಗೆ ಮೆರವಣಿಗೆ ಮಾಡಿದರು.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬಾಕಿ ಪಾವತಿಸಬೇಕು. ಪ್ರತಿ ಕ್ವಿಂಟಲ್ ಕಬ್ಬಿಗೆ ₹ 3 ಸಾವಿರ ಬೆಲೆ ನಿಗದಿ ಮಾಡಬೇಕು. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.
ಬರ ಪೀಡಿತ ತಾಲ್ಲೂಕುಗಳ ರೈತರಿಗೆ ಪ್ರತಿ ಎಕರೆಗೆ ₹ 10 ಸಾವಿರ ಪರಿಹಾರ ಕೊಡಬೇಕು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲ ಮನ್ನಾ ಮಾಡಬೇಕು. ರೈತರ ಎಲ್ಲ ಬೆಳೆಗಳಿಗೆ ಬೆಂಬಲ ನೀಡಬೇಕು. ಹೊಸದಾಗಿ ಕೃಷಿ ಸಾಲ ಪಡೆಯಲು ಸಾಲ ನೀತಿಯನ್ನು ಸರಳಗೊಳಿಸಬೇಕು. ಬರ ಪೀಡಿತ ಕೃಷಿ ಕುಟುಂಬಕ್ಕೆ ₹ 10 ಸಾವಿರ ನೆರವು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಈಶ್ವರಸಿಂಗ್ ಠಾಕೂರ್, ಸೋಮನಾಥ ಪಾಟೀಲ, ಬಾಬುರಾವ್ ಕಾರಭಾರಿ, ಪ್ರಮುಖರಾದ ವಿಜಯಕುಮಾರ ಪಾಟೀಲ, ರಾಜಕುಮಾರ ಚಿದ್ರಿ, ಹಣಮಂತ ಬುಳ್ಳಾ, ಚಂದ್ರಶೇಖರ ಗಾದಾ, ಪ್ರಸನ್ನಲಕ್ಷ್ಮಿ ದೇಶಪಾಂಡೆ, ಶಂಕರ ರೆಡ್ಡಿ, ನಾಗಶೆಟ್ಟಿ ವಡ್ಡೆ, ಲುಂಬಿಣಿ ಗೌತಮ, ಸಂಜು ಬಿರಾದಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.