ADVERTISEMENT

ಸಿದ್ದರಾಮಯ್ಯ ಪ್ರಧಾನಿ ಮೋದಿ ಪಾದದ ದೂಳಿನ ಸಮವಲ್ಲ: ವಿಜಯೇಂದ್ರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 16:32 IST
Last Updated 18 ಏಪ್ರಿಲ್ 2025, 16:32 IST
ಬಿಜೆಪಿ ಜನಾಕ್ರೋಶ ಯಾತ್ರೆಯ ಅಂಗವಾಗಿ ಬೀದರ್‌ನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಬಹಿರಂಗ ಸಭೆ ಉದ್ದೇಶಿಸಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು
ಬಿಜೆಪಿ ಜನಾಕ್ರೋಶ ಯಾತ್ರೆಯ ಅಂಗವಾಗಿ ಬೀದರ್‌ನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಬಹಿರಂಗ ಸಭೆ ಉದ್ದೇಶಿಸಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು   

ಬೀದರ್‌: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿಯವರ ಪಾದದ ದೂಳಿನ ಸಮವಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಜನಾಕ್ರೋಶ ಯಾತ್ರೆಯ ಅಂಗವಾಗಿ ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಸಮೀಪ ಶುಕ್ರವಾರ ಸಂಜೆ ಏರ್ಪಡಿಸಿದ್ದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.

ಸಿದ್ದರಾಮಯ್ಯನವರು ಪದೇ ಪದೇ ಮೋದಿಯವರ ವಿರುದ್ಧ ಮಾತನಾಡುತ್ತಾರೆ. ಅವರನ್ನು ಟೀಕಿಸುತ್ತಾರೆ. ಇದೆಷ್ಟು ಸರಿ? ಬಿ.ಎಸ್‌.ಯಡಿಯೂರಪ್ಪನವರು ರೈತರ ಪರ ಬಜೆಟ್‌ ಮಂಡಿಸಿದ್ದರು. ಅವರನ್ನು ಈಗಲೂ ರೈತರು. ಸಿದ್ದರಾಮಯ್ಯನವರೇ ನಿಮ್ಮನ್ನು ಯಾವ ಕಾರಣಕ್ಕಾಗಿ ಜನ ನೆನಪಿಸುತ್ತಾರೆ ಎಂದು ಪ್ರಶ್ನಿಸಿದರು.

ADVERTISEMENT

ಸಿದ್ದರಾಮಯ್ಯನವರ 20 ತಿಂಗಳ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಅವರು ಮಂಡಿಸಿದ ಬಜೆಟ್‌ ಪಾಕಿಸ್ತಾನದ ಬಜೆಟ್‌ ಅಥವಾ ಕರ್ನಾಟಕದ ಬಜೆಟ್‌ ಎಂಬುದರ ಬಗ್ಗೆ ಅನುಮಾನ ಮೂಡುತ್ತಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಸಾಮಾಜಿಕ, ಆರ್ಥಿಕ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹38 ಸಾವಿರ ಕೋಟಿ ಅನುದಾನ ದುರುಪಯೋಗ ಮಾಡಿದ್ದಾರೆ. ಬಿಜೆಪಿ ವಿರೋಧ ಪಕ್ಷವಾಗಿ ಸರ್ಕಾರದ ಜವಾಬ್ದಾರಿ ನೆನಪಿಸಲು ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ ಎಂದು ಉದ್ದೇಶ ವಿವರಿಸಿದರು.

ಕಳೆದ 20 ತಿಂಗಳಲ್ಲಿ ಸಿದ್ದರಾಮಯ್ಯನವರು ಈ ರಾಜ್ಯಕ್ಕೆ ಏನೂ ಮಾಡಿಲ್ಲ. ಎಲ್ಲ ವಸ್ತುಗಳ ಬೆಲೆ ಏರಿಕೆಯ ಕೆಲಸ ಮಾಡಿದ್ದಾರೆ. ರೈತ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಮುಂದಿನ ಮೂರು ವರ್ಷ ನಿರಂತರವಾಗಿ ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ನಡೆಸಿ, ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಮುಂದೆ ಯಾವಾಗ ಚುನಾವಣೆ ನಡೆದರೂ ನಮ್ಮ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ ಮಾತನಾಡಿ, ಕರ್ನಾಟಕವು ಅತ್ಯಾಚಾರಿಗಳ ರಾಜ್ಯವಾಗಿ ಬದಲಾಗಿದೆ. ನಿತ್ಯ ದರೋಡೆಗಳು ನಡೆಯುತ್ತಿವೆ. ಹಳೆಯ ಕಲ್ಲುಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಹೊಸ್‌ ಬಿಲ್‌ ಮಾಡಲಾಗುತ್ತಿದೆ. ಇದು ರಾಜ್ಯ ಸರ್ಕಾರದ ಕಾರ್ಯವೈಖರಿ ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯೂ ಆದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಜನರಿಗೆ ‘ಅಚ್ಛೆ ದಿನ್‌’ ಕೊಟ್ಟರೆ, ರಾಜ್ಯ ಸರ್ಕಾರವು ‘ಕೆಟ್ಟ ದಿನ’ ಕೊಡುತ್ತಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಕ್ಕಿರುವ ವ್ಯತ್ಯಾಸ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಬುರ್ಖಾ ಧರಿಸಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಆದರೆ, ಜನಿವಾರ, ಲಿಂಗ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ಇದು ರಾಜ್ಯ ಸರ್ಕಾರದ ತುಷ್ಟೀಕರಣ ನೀತಿ ಎಂದು ಹರಿಹಾಯ್ದರು.

ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರ ದಂಡು ಹೆಜ್ಜೆ ಹಾಕಿತು

‘ದಲಿತರು ಕುರಿಗಳಾಗಿದ್ದೇವೆ ತೋಳಗಳ ಸಂಹಾರ ಮಾಡಬೇಕು’

‘ದಲಿತರು ಕುರಿಗಳಾಗಿದ್ದೇವೆ. ಅಧಿಕಾರ ನಡೆಸುತ್ತಿರುವವರು ತೋಳಗಳಾಗಿದ್ದಾರೆ. ಆ ತೋಳಗಳನ್ನು ಸಂಹಾರ ಮಾಡಬೇಕು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬೀದರ್‌ ಜಿಲ್ಲೆಯಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಲಿತರ ಉದ್ಧಾರವಾಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾರೆ. ಅವರ ಪಕ್ಷ 65–70 ವರ್ಷ ಅಧಿಕಾರ ನಡೆಸಿದೆ. 55 ವರ್ಷಗಳ ಕಾಲ ಅವರು ಅಧಿಕಾರಕ್ಕೆ ಗೂಟ ಹೊಡೆದುಕೊಂಡು ಕುಳಿತಿದ್ದರು. ಅವರೇಕೆ ದಲಿತರ ಉದ್ಧಾರ ಮಾಡಲಿಲ್ಲ? ಬಡತನವೇಕೆ ದೂರ ಮಾಡಲಿಲ್ಲ? ಅಸ್ಪೃಶ್ಯತೆ ಏಕೆ ನಿವಾರಿಸಲಿಲ್ಲ ಎಂದು ಪ್ರಶ್ನಿಸಿದರು. ದಲಿತರ ಹೆಸರಿನಲ್ಲಿ ಖರ್ಗೆಯವರು ಲಕ್ಷಾಂತರ ಕೋಟಿ ಆಸ್ತಿ ಮಾಡಿದ್ದಾರೆ. ಅದನ್ನೇಕೆ ಅವರು ದಲಿತರಿಗೆ ಕೊಟ್ಟಿಲ್ಲ. ಇಂದು ದಲಿತರ ಉದ್ಧಾರ ಆಗದಿದ್ದರೆ ಅದಕ್ಕೆ ದಲಿತರೇ ನೇರ ಕಾರಣ. ಖರ್ಗೆಯವರು ರಾಜ್ಯಸಭೆಯಲ್ಲಿದ್ದಾರೆ. ಅವರ ಅಳಿಯ ಎಂಪಿ ಮಗ ಮಂತ್ರಿ ಆಗಿದ್ದಾರೆ.

ಮೀಸಲು ಕ್ಷೇತ್ರಗಳಿಗೆ ಯಾರನ್ನೋ ನಿಲ್ಲಿಸಿ ಸೋಲಿಸಿ ಮಗನಿಗೆ ಮಂತ್ರಿ ಮಾಡುತ್ತಾರೆ. ನೀವು ರಾಜೀನಾಮೆ ಕೊಟ್ಟರೆ ದಲಿತರು ಉದ್ಧಾರವಾಗುತ್ತಾರೆ. ಮೀಸಲಾತಿ ಮೂಲಕ ದಲಿತರ ಅಭಿವೃದ್ಧಿ ಆಗಬೇಕೆಂದು ಅಂಬೇಡ್ಕರ್‌ ಕನಸು ಕಂಡಿದ್ದರು. ಆದರೆ ಅವರ ಆಶಯ ಈಡೇರಿಲ್ಲ. ಕಾಂಗ್ರೆಸ್‌ ಪಕ್ಷ ಎಷ್ಟು ಡೇಂಜರೋ ಅಷ್ಟೇ ಆ ಪಕ್ಷದಲ್ಲಿರುವ ದಲಿತ ಮಂತ್ರಿಗಳು ಶಾಸಕರು ಕೂಡ ಡೇಂಜರ್‌ ಎಂದು ಆರೋಪಿಸಿದರು.

‘ಜನಾಕ್ರೋಶ’ ಯಾತ್ರೆಗೆ ಕಾರ್ಯಕರ್ತರ ದಂಡು

ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಪಕ್ಷದ ಕಾರ್ಯಕರ್ತರ ದಂಡು ಹೆಜ್ಜೆ ಹಾಕಿತು. ನಗರದ ಗಣೇಶ ಮೈದಾನದಿಂದ ಆರಂಭಗೊಂಡ ಯಾತ್ರೆ ಪ್ರಮುಖ ಮಾರ್ಗಗಳ ಮೂಲಕ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ವರೆಗೆ ಸಾಗಿತು. ಮಾರ್ಗದುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಧ್ವಜಗಳು ರಾರಾಜಿಸಿದವು.

ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಡಾ. ಸಿದ್ದಲಿಂಗಪ್ಪ ಪಾಟೀಲ ಪ್ರಭು ಚವಾಣ್‌ ಶರಣು ಸಲಗರ್‌ ಎಂ.ಜಿ. ಮುಳೆ ಶಶಿಲ್‌ ಜಿ. ನಮೋಶಿ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಪೀರಪ್ಪ ಔರಾದೆ ಕಿರಣ ಪಾಟೀಲ ನಗರ ಘಟಕದ ಅಧ್ಯಕ್ಷ ಶಶಿಧರ ಹೊಸಳ್ಳಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಉಲ್ಲಾಸಿನಿ ಮುದಾಳೆ ಕಲಬುರಗಿ ಮಾಧ್ಯಮ ವಿಭಾಗದ ಉಸ್ತುವಾರಿ ವೆಂಕಟೇಶಪ್ರಸಾದ ಮಾಲಪಾಟಿ ಕರುಣಾಕರ ಮುಖಂಡರಾದ ಭಗವಂತ ಖೂಬಾ ರಘುನಾಥರಾವ್‌ ಮಲ್ಕಾಪೂರೆ ಪ್ರಕಾಶ ಖಂಡ್ರೆ ಈಶ್ವರ ಸಿಂಗ್‌ ಠಾಕೂರ್‌ ಗುಂಡಪ್ಪ ವಕೀಲ ಬಾಬುವಾಲಿ ಬಸವರಾಜ ಆರ್ಯ ಚನ್ನಬಸವ ಬಳತೆ ಗುರುನಾಥ ರಾಜಗೀರಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.