ADVERTISEMENT

ಸಾಹಿತಿಗಳ ಬದುಕು ಪ್ರೇರಣೆಯಾಗಲಿ

ಸಭಾಪತಿ ಮಲ್ಕಾಪುರೆ ಅವರಿಂದ ಭಾವಗಂಗೆ ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 12:46 IST
Last Updated 27 ನವೆಂಬರ್ 2022, 12:46 IST
ಬೀದರ್ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ ಮಾತನಾಡಿದರು
ಬೀದರ್ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ ಮಾತನಾಡಿದರು   

ಬೀದರ್: ‘ಹಿರಿಯ ಕವಿಗಳು, ಸಾಹಿತಿಗಳ ಆದರ್ಶ ಬದುಕು, ಬರಹ ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ ಹೇಳಿದರು.

ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಸಂಜೀವಕುಮಾರ ಅತಿವಾಳೆ ಸಂಪಾದಿಸಿದ ‘ಭಾವಗಂಗೆ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಈ ಕೃತಿಯಲ್ಲಿ ಎಂ.ಜಿ.ಗಂಗನಪಳ್ಳಿ ಅವರ ಬಗ್ಗೆ 82 ಲೇಖಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಗೌರವದ ಜೀವನ ಮತ್ತು ಆದರ್ಶಗಳ ಪಕ್ಷಿನೋಟವೇ ಈ ಕೃತಿಯಾಗಿದೆ. ಇಂಥ ಗ್ರಂಥ ಲೋಕಾರ್ಪಣೆ ಮಾಡಿದ್ದು ನನ್ನ ಸೌಭಾಗ್ಯ ಎಂದುಕೊಂಡಿದ್ದೇನೆ’ ಎಂದರು.

ADVERTISEMENT

ಮೈಸೂರಿನ ಸಾಹಿತಿ ಮತ್ತು ಸಂಶೋಧಕ ಡಾ.ರಾಜಶೇಖರ ಜಮದಂಡಿ ಮಾತನಾಡಿ,‘ಸುಮಾರು 50 ವರ್ಷಗಳಿಂದ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಸಾನೆಟ್ ಕವನಗಳನ್ನು ಬರೆದು ಸಾಹಿತ್ಯದ ಸಾಹುಕಾರ ಮತ್ತು ಅಕ್ಷರದ ತಪಸ್ವಿಯಾಗಿ ಹೊರಹೊಮ್ಮಿದ್ದು ಹಿರಿಯ ಸಾಹಿತಿ ಎಂ.ಜಿ.ಗಂಗನಪಳ್ಳಿ. ಅವರು ಈ ಭಾಗದ ಶ್ರೇಷ್ಠ ಕವಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲಬಲ್ಲವರಾಗಿದ್ದಾರೆ’ ಎಂದರು.

ಶಾಸಕ ಬಂಡೆಪ್ಪ ಕಾಶೆಂಪುರ ಮಾತನಾಡಿ,‘ಗಂಗನಪಳ್ಳಿ ಅವರ ಸುವರ್ಣ ಸಾಹಿತ್ಯದ ಸುದೀರ್ಘ ಪಯಣವನ್ನು ಗುರುತಿಸಿ ಸನ್ಮಾನಿಸಿದ್ದು ಅಭಿನಂದನೀಯ ಕಾರ್ಯ. ಸಾಹಿತ್ಯ ಎಂಬುದು ಅಂತರಂಗದಿಂದ ಬರಬೇಕು. ಅದು ಭಾವನೆಗಳ ಸರಮಾಲೆಯಾಗಿದೆ. ಇಂತಹ ಮಾದರಿ ಕಾರ್ಯ ಮಾಡಿದ್ದು ಗಂಗನಪಳ್ಳಿ’ ಎಂದರು.

ಅತಿವಾಳೆ ಪ್ರತಿಷ್ಠಾನದ ಅಧ್ಯಕ್ಷ ಸಂಜೀವಕುಮಾರ ಅತಿವಾಳೆ ಮಾತನಾಡಿದರು.

ಬಿಡಿಎ ಅಧ್ಯಕ್ಷ ಬಾಬು ವಾಲಿ, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಸಿದ್ದಾರೆಡ್ಡಿ ಫೌಂಡೇಶನ್ ಅಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ ಹಾಗೂ ಸಾಹಿತಿ ಪುಣ್ಯವತಿ ವಿಸಾಜಿ ಹಾಗೂ ಎಂ.ಜಿ.ಗಂಗನಪಳ್ಳಿ ಮಾತನಾಡಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ಜಾಲಿಂದರ್ ಗಂಗನಪಳ್ಳಿ, ಅಮೃತರಾವ ಚಿಮಕೋಡೆ, ಎಂ.ಜಿ.ದೇಶಪಾಂಡೆ, ವಕೀಲ ಬಿ.ಎಸ್.ಪಾಟೀಲ, ಪ್ರೊ.ದೇವೇಂದ್ರ ಕಮಲ, ಹಂಶಕವಿ, ಬಾಬುರಾವ ದಾನಿ, ವಿಜಯಕುಮಾರ ಸೋನಾರೆ ಹಾಗೂ ಶಂಭುಲಿಂಗ ವಾಲದೊಡ್ಡಿ ಇದ್ದರು.

ಶಿವಾನಿ ಸ್ವಾಮಿ ತಂಡದವರು ನಾಡಗೀತೆ ಹಾಡಿದರು. ಭವಾನಿ ವಗ್ಗೆ ಹಾಗೂ ಖುಷಿ ಕಾಶಿ ನೃತ್ಯ ಪ್ರದರ್ಶಿಸಿದರು. ಆತ್ಮಾನಂದ ಬಂಬುಳಗಿ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು. ಭೀಮಶಾ ಬಸಲಾಪುರ ವಂದಿಸಿದರು. ಕಲಾವಿದರು ಹಾಸ್ಯ, ನೃತ್ಯ, ಗಾಯನ ಮತ್ತು ಜಾದೂ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.