ADVERTISEMENT

ತನಿಖೆಗೆ ಸೂಚನೆ–ಸಚಿವ ಡಾ. ಶರಣಪ್ರಕಾಶ

ಬ್ರಿಮ್ಸ್‌ನಲ್ಲಿ ಅವಧಿ ಮೀರಿದ ಗುಳಿಗೆ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:45 IST
Last Updated 1 ಫೆಬ್ರುವರಿ 2026, 5:45 IST
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಶನಿವಾರ ಬೀದರ್‌ನ ಬ್ರಿಮ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಶನಿವಾರ ಬೀದರ್‌ನ ಬ್ರಿಮ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಬೀದರ್‌: ಇಲ್ಲಿನ ಬ್ರಿಮ್ಸ್‌ನಲ್ಲಿ ಅವಧಿ ಮೀರಿದ ಗುಳಿಗೆಗಳನ್ನು ರೋಗಿಗಳಿಗೆ ಕೊಡಲಾಗುತ್ತಿದೆ ಎಂಬ ವಿಚಾರ ಮಾಧ್ಯಮಗಳಿಂದ ತಿಳಿದು ಬಂದಿದ್ದು, ಇದರ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ಶನಿವಾರ ನಗರದ ಬ್ರಿಮ್ಸ್‌ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬ್ರಿಮ್ಸ್‌ನಲ್ಲಿ ಏನೇನು ಸಮಸ್ಯೆ, ನ್ಯೂನತೆಗಳಿವೆಯೋ ಅದನ್ನು ಸರಿಪಡಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಎಚ್‌ಒಡಿಸಿ ಅವರೊಂದಿಗೆ ಚರ್ಚಿಸಿ, ಏನೇನು ಸಮಸ್ಯೆ ಇದೆ, ಏನೇನು ಬೇಕು ಎಂದು ತಿಳಿದು, ಅದಕ್ಕೆ ಪೂರಕವಾದ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರಾಜ್ಯಮಟ್ಟದಲ್ಲಿ ಒಂದು ಸಭೆ ಕೂಡ ನಡೆಸಲಾಗಿದೆ. ಮುಂದಿನ ವರ್ಷದ ಬಜೆಟ್‌ನಲ್ಲಿ ಬ್ರಿಮ್ಸ್‌ಗೆ ಅಗತ್ಯ ಅನುದಾನ ನೀಡಲಾಗುವುದು’ ಎಂದು ಹೇಳಿದರು.

ಬ್ರಿಮ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ‘ಡಿ’ ಗ್ರುಪ್‌ ನೌಕರರ ವೇತನವನ್ನು ಡಿಸೆಂಬರ್‌ ತನಕ ಪಾವತಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿ ನೇಮಕವಾಗಿದ್ದು, ವೇತನ ಪಾವತಿಗೆ ಸಮಸ್ಯೆಯಾಗಿತ್ತು. ಈಗ ಅದನ್ನು ಆರ್ಥಿಕ ಇಲಾಖೆಯ ಗಮನಕ್ಕೆ ತಂದು ಸರಿಪಡಿಸಲಾಗಿದೆ. ಕೆಲ ವೈದ್ಯರ ಬಾಕಿ ವೇತನ ಕೂಡ ಪಾವತಿಗೆ ಸೂಚಿಸಲಾಗಿದೆ. ವೈದ್ಯರು ದಿನಕ್ಕೆ ನಾಲ್ಕು ಸಲ ಬಯೋಮೆಟ್ರಿಕ್‌ ಕೊಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದನ್ನು ಆಧರಿಸಿ ಅವರಿಗೆ ವೇತನ ಪಾವತಿಸಲಾಗುತ್ತಿದೆ ಎಂದರು.

ADVERTISEMENT

ಬ್ರಿಮ್ಸ್‌ನಲ್ಲಿ ಅತಿ ಶೀಘ್ರದಲ್ಲಿ ಬಹಳಷ್ಟು ಬದಲಾವಣೆ ನೋಡುತ್ತೀರಿ. ಇದು ಜಿಲ್ಲಾ ಕೇಂದ್ರವಾಗಿದ್ದು, ಬಹಳಷ್ಟು ರೋಗಿಗಳು ಬರುತ್ತಾರೆ. ಆಡಳಿತ ಬಹಳ ದುರ್ಬಲವಾಗಿದೆ. ವೈದ್ಯರಿಗೆ ಆ ಕೌಶಲ ಇರುವುದಿಲ್ಲ. ಅದಕ್ಕೆ ಏನೇನು ಮಾಡಬೇಕು ಎಲ್ಲವೂ ಮಾಡಲಾಗುತ್ತಿದೆ. ಕ್ಯಾಥ್‌ಲ್ಯಾಬ್‌ ಸಿದ್ಧವಾಗಿದ್ದು, ಅದನ್ನು ಶುರು ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ ಸೇರಿದಂತೆ ಇತರೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಜಯದೇವ ಜೊತೆಗೆ ಒಪ್ಪಂದ ‘

ಬೀದರ್‌ನ ಬ್ರಿಮ್ಸ್‌ನಲ್ಲಿ ಕ್ಯಾಥ್‌ಲ್ಯಾಬ್‌ ಆರಂಭಿಸುವ ಸಂಬಂಧ ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು. ತುರ್ತು ಚಿಕಿತ್ಸೆ ಆಪರೇಶನ್ ಥಿಯೇಟರ್‌ ಅನ್ನು ತಕ್ಷಣವೇ ರಿಪೇರಿ ಮಾಡಬೇಕು. ನೆಲಮಹಡಿಯಲ್ಲಿ ನೀರು ಸೋರಿಕೆ ಹಾಗೂ ಸಂಗ್ರಹಕ್ಕಾಗಿ ಕೈಗೊಂಡ ಕಾಮಗಾರಿಯನ್ನು ತಕ್ಷಣವೇ ರಿಪೇರಿ ಮಾಡಬೇಕೆಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.