ADVERTISEMENT

ಗುರುನಾನಕ್‌ ದೇವ ಜಯಂತಿ ಆಚರಣೆ

ಧಾರ್ಮಿಕ ಧ್ವಜಗಳ ಸಾಂಕೇತಿಕ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 14:13 IST
Last Updated 30 ನವೆಂಬರ್ 2020, 14:13 IST
ಗುರುನಾನಕ್‌ ಜಯಂತಿ ಅಂಗವಾಗಿ ಸಿಖ್‌ರು ಬೀದರ್‌ನಲ್ಲಿ ಸೋಮವಾರ ಧಾರ್ಮಿಕ ಧ್ವಜ ಹಾಗೂ ಶಸ್ತ್ರಗಳೊಂದಿಗೆ ಸಾಂಕೇತಿಕ ಮೆರವಣಿಗೆ ನಡೆಸಿದರು
ಗುರುನಾನಕ್‌ ಜಯಂತಿ ಅಂಗವಾಗಿ ಸಿಖ್‌ರು ಬೀದರ್‌ನಲ್ಲಿ ಸೋಮವಾರ ಧಾರ್ಮಿಕ ಧ್ವಜ ಹಾಗೂ ಶಸ್ತ್ರಗಳೊಂದಿಗೆ ಸಾಂಕೇತಿಕ ಮೆರವಣಿಗೆ ನಡೆಸಿದರು   

ಬೀದರ್: ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ ಅವರ 551ನೇ ಜಯಂತಿ ಆಚರಣೆ ಕಾರ್ಯಕ್ರಮ ಇಲ್ಲಿನ ಗುರುದ್ವಾರದ ಆವರಣದಲ್ಲಿ ಸೋಮವಾರ ಕೋವಿಡ್‌ ಸೋಂಕಿನ ಕಾರಣ ಅತ್ಯಂತ ಸರಳವಾಗಿ ನಡೆಯಿತು.

ಬೆಳಿಗ್ಗೆ ಧಾರ್ಮಿಕ ಮುಖಂಡರು ಗುರುದ್ವಾರದಲ್ಲಿ ಕೀರ್ತನ ಹಾಗೂ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು.

ನಂತರ ಸಾಮೂಹಿಕ ಗುರುಗ್ರಂಥ ಪಠಣ ಕಾರ್ಯಕ್ರಮ ವಿಧಿಬದ್ಧವಾಗಿ ಜರುಗಿತು. ಗುರುದ್ವಾರಕ್ಕೆ ಪುಷ್ಪ ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೀದರ್‌ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ಬಂದು ಗ್ರಂಥ ಸಾಹಿಬ್‌ ದರ್ಶನ ಪಡೆದರು.

ADVERTISEMENT

ಸಂಜೆ ಗುರುದ್ವಾರದ ಪ್ರಮುಖರು ಗುರುಗ್ರಂಥ ಸಾಹಿಬ್‌ ಹಾಗೂ ಗುರುನಾನಕ್‌ ದೇವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಂಕೇತಿಕ ಮೆರವಣಿಗೆಗೆ ಚಾಲನೆ ನೀಡಿದರು. ಸಾಂಪ್ರದಾಯಿಕ ವೇಷ ಧರಿಸಿದ್ದ ಯುವಕರು ಹಾಗೂ ಕರ ಸೇವಕರು ನಿಶಾನ್ ಸಾಹಿಬ್ ಹಾಗೂ ಧಾರ್ಮಿಕ ಧ್ವಜ ಹಿಡಿದು ಜಯಘೋಷ ಮೊಳಗಿಸಿದರು.

ನೀಲಿ ಹಾಗೂ ಹಳದಿ ಬಣ್ಣದ ಧಾರ್ಮಿಕ ಧ್ವಜಗಳು ಹಾಗೂ ನಿಶಾನ್‌ ಸಾಹಿಬ್‌ ಹಿಡಿದಿದ್ದ ಯುವಕರು ಗುರುದ್ವಾರ ಆವರಣ ಸುತ್ತಹಾಕಿ ಮೆರವಣಿಗೆಯನ್ನು ಮುಕ್ತಾಯಗೊಳಿಸಿದರು. ಯುವಕರು ಖಡ್ಗವನ್ನು ಗಾಳಿಯಲ್ಲಿ ತಿರುಗಿಸುತ್ತ ಕತ್ತಿ ವರಸೆ ಪ್ರದರ್ಶನ ನೀಡಿದರು. ವ್ಯಕ್ತಿಯೊಬ್ಬರು ಕುದುರೆ ಮೇಲೆ ಕುಳಿತು ನಗಾರಿ ಬಾರಿಸಿದರೆ, ಕೆಲ ಯುವಕರು ಉರಿಯುವ ದೀವಟಿಗೆ, ಖಡ್ಗ ಹಾಗೂ ಲಾಠಿ ತಿರುಗಿಸಿ ಸಾರ್ವಜನಿಕರ ಗಮನ ಸೆಳೆದರು.

ಗುರುದ್ವಾರ ಶ್ರೀ ನಾನಕ್‌ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್, ಕಮಿಟಿ ಸದಸ್ಯರು, ಸಿಖ್‌ ಮುಖಂಡರು ಪಾಲ್ಗೊಂಡಿದ್ದರು. ಗುರುನಾನಕ ಆಸ್ಪತ್ರೆಯ ಮುಂಭಾಗದ ರಸ್ತೆ ಬದಿಯಲ್ಲಿ ಕುಳಿತು ಕೆಲವರು ಧಾರ್ಮಿಕ ಚಿಹ್ನೆವುಳ್ಳ ಸಾಮಗ್ರಿ, ಚಿಕ್ಕದಾದ ಖಡ್ಗ ಹಾಗೂ ಆಟಿಕೆ ಸಾಮಾನುಗಳನ್ನು ಮಾರಾಟ ಮಾಡಿದರು. ಆವರಣದಲ್ಲಿ ಹೆಚ್ಚಿನ ಜನ ಸೇರಿದ್ದರಿಂದ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.