ADVERTISEMENT

ಚನಶೆಟ್ಟಿ ಪರ ಕಲಾವಿದರ ಪ್ರಚಾರ

ಜಿಲ್ಲಾ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:10 IST
Last Updated 21 ಏಪ್ರಿಲ್ 2021, 16:10 IST
ವಿಜಯಕುಮಾರ ಸೋನಾರೆ
ವಿಜಯಕುಮಾರ ಸೋನಾರೆ   

ಬೀದರ್: ‘ಹಲವು ವರ್ಷಗಳ ನಂತರ ನಗರದಲ್ಲಿ ಕನ್ನಡ ಭವನಕ್ಕೆ ನಿವೇಶನ ಮಂಜೂರಾತಿ ಪಡೆದು ಕಟ್ಟಡ ಕಾರ್ಯವನ್ನೂ ಆರಂಭಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಹಾಲಿ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರ ಮರು ಆಯ್ಕೆಗೆ ಜಿಲ್ಲೆಯ ಕಲಾವಿದರ ಬಳಗ ಪರಿಶ್ರಮಿಸುತ್ತಿದೆ’ ಎಂದು ಜಿಲ್ಲಾ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ತಿಳಿಸಿದರು.

‘ಮೇ 9ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಎರಡನೇ ಅವಧಿಗೆ ಸ್ಪರ್ಧಿಸಿರುವ ಚನಶೆಟ್ಟಿ ಅವರಿಗೆ ಕಲಾವಿದರು ಈಗಾಗಲೇ ಬೆಂಬಲ ಘೋಷಿಸಿದ್ದು, ಅವರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಚನಶೆಟ್ಟಿ ಅವರ ಅವಧಿಯಲ್ಲಿ ಅನೇಕ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳು ನಡೆದಿವೆ. ರಾಜ್ಯ ಸರ್ಕಾರ ಕನ್ನಡ ಭವನಕ್ಕೆ ₹2 ಕೋಟಿ ಬಿಡುಗಡೆ ಮಾಡಿದೆ. ಕನ್ನಡಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳಿಗೆ ಜನ ಮನ್ನಣೆ ದೊರೆತಿದೆ. ಹೀಗಾಗಿ ಸುರೇಶ ಚೆನ್ನಶೆಟ್ಟಿಯವರ ಪರವಾಗಿ ಮನೆ ಮನೆ ತೆರಳಿ ಮತಯಾಚಿಸಲಾಗುತ್ತಿದೆ’ ಎಂದರು.

ADVERTISEMENT

ಜಿಲ್ಲಾ ಸ್ನಾತಕೋತ್ತರ ಸಮಾಜ ಕಾರ್ಯಕರ್ತರ ಸಂಘದ ಅಧ್ಯಕ್ಷ ಸುಧಾಕರ ಎಲ್ಲಾನೋರ ಮಾತನಾಡಿ, ‘ನಮ್ಮ ಸಂಘ ಈಚೆಗೆ ಸಭೆ ನಡೆಸಿ ಸುರೇಶ ಚೆನಶೆಟ್ಟಿ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ’ ಎಂದು ತಿಳಿಸಿದರು.

ಜಾನಪದ ಕಲಾವಿದ ಶಂಕರ ಚೊಂಡಿ ಮಾತನಾಡಿ, ‘ಪ್ರತಿಸ್ಪರ್ಧಿ ಗುಂಪಿನ ನೇತೃತ್ವ ವಹಿಸಿಕೊಂಡಿರುವ ವ್ಯಕ್ತಿ ಬಸವ ಉತ್ಸವದಲ್ಲಿ ಕಲಾವಿದರ ಹೆಸರಲ್ಲಿ ಹಣ ದೋಚಿದ್ದಾರೆ. ಜಾನಪದ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರಿಗೆ ಅರ್ಧ ವೇತನ ನೀಡಿ ಅನ್ಯಾಯ ಮಾಡಲಾಗುತ್ತಿದೆ. ಆದ್ದರಿಂದ ಕಸಾಪ ಚುನಾವಣೆಯಲ್ಲಿ ಮತದಾರರು ಎಚ್ಚರಿಕೆಯಿಂದ ಮತ ಹಾಕಬೇಕು’ ಎಂದು ಮನವಿ ಮಾಡಿದರು.

ಎಂ.ಪಿ. ಮುದಾಳೆ, ಸುನೀಲ ಭಾವಿಕಟ್ಟಿ, ಮಾರುತಿ ಮಾಸ್ಟರ್, ಸಂತೋಷ ಎಣಕೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.