ಭಾಲ್ಕಿ: ‘ಶಿವಾಜಿ ಮಹಾರಾಜರು ಅಪ್ಪಟ ದೇಶಪ್ರೇಮಿ, ಮಹಾನ್ ಪರಾಕ್ರಮಿ ಆಗಿದ್ದರು’ ಎಂದು ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಹೇಳಿದರು.
ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮದ ಬೀದರ್ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಶಿವಾಜಿ ಈ ದೇಶ ಕಂಡ ಮಹಾನ್ ಹೋರಾಟಗಾರ. ಅವರು ಹೆಸರು ಕೇಳಿದರೆ ವೈರಿಗಳ ಎದೆ ನಡುಗುತ್ತಿತ್ತು. ಅಂಥ ವೀರರು ಜನಿಸಿದ್ದು ಈ ನೆಲದ ಭಾಗ್ಯವಾಗಿದೆ’ ಎಂದರು.
ಕುಲಸಚಿವೆ (ಆಡಳಿತ) ಸುರೇಖಾ ಮಾತನಾಡಿ,‘ಇಂದಿನ ಯುವಕರಿಗೆ ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಶೌರ್ಯ, ಸಾಹಸ, ಪರಾಕ್ರಮಗಳು ಆದರ್ಶವಾಗಬೇಕು. ಆರೋಗ್ಯವಂತ ಸಮರ್ಥ ದೇಶದ ನಿರ್ಮಾಣದಲ್ಲಿ ಶಿವಾಜಿ ಮಹಾರಾಜರ ಜೀವನ ಹಾಗೂ ಸಾಧನೆ ಅಜರಾಮರವಾಗಿದೆ’ ಎಂದರು.
ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಶಾಂತಲಿಂಗ ಸಾವಳಗಿ, ಜಿಲ್ಲಾ ಅಬಕಾರಿ ಆಯುಕ್ತ ರವಿಶಂಕರ.ಎ., ವಿಶೇಷಾಧಿಕಾರಿ ರವೀಂದ್ರನಾಥ ವಿ.ಗಬಾಡಿ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.