ADVERTISEMENT

ಬಸವಸೇವಾ ಪ್ರತಿಷ್ಠಾನ ದಾಸೋಹ ಮಂಟಪಕ್ಕೆ ₹ 1 ಕೋಟಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 15:57 IST
Last Updated 7 ಫೆಬ್ರುವರಿ 2020, 15:57 IST
ಬೀದರ್‌ನ ಬಸವಗಿರಿಯಲ್ಲಿ ಶುಕ್ರವಾರ ನಡೆದ ವಚನ ವಿಜಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು
ಬೀದರ್‌ನ ಬಸವಗಿರಿಯಲ್ಲಿ ಶುಕ್ರವಾರ ನಡೆದ ವಚನ ವಿಜಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು   

ಬೀದರ್: ‘ಬಸವಸೇವಾ ಪ್ರತಿಷ್ಠಾನದ ದಾಸೋಹ ಮಂಟಪದ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ₹ 1 ಕೋಟಿ ಅನುದಾನ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ’ ಮಾಡಿದರು.

ಇಲ್ಲಿಯ ಬಸವಗಿರಿಯಲ್ಲಿ ಶುಕ್ರವಾರ ವಚನ ವಿಜಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು,
ಬಸವಸೇವಾ ಪ್ರತಿಷ್ಠಾನದ ಬಸವತತ್ವ ಪ್ರಸಾರ ಮತ್ತು ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಬೀದರ್ ಶರಣರ ನಾಡು. ಇಲ್ಲಿ ನಡೆದ ಸಾಮಾಜಿಕ ಕ್ರಾಂತಿ ವಿಶ್ವದಲ್ಲೇ ಮಾದರಿಯಾಗಿದೆ. ವಚನ ವಿಜಯೋತ್ಸವದ ಮೂಲಕ ಶರಣರ ವಿಚಾರಧಾರೆ ಜನಮನಕ್ಕೆ ಮುಟ್ಟಿಸುತ್ತಿರುವುದು ಪವಿತ್ರ ಕಾರ್ಯವಾಗಿದೆ. ನೈತಿಕ ಮೌಲ್ಯ ಬೆಳೆಸಿಕೊಳ್ಳಲು, ಆದರ್ಶ ಕುಟುಂಬ ಮತ್ತು ಸಮಾಜ ನಿರ್ಮಾಣಕ್ಕೆ ವಚನಗಳು ಸಹಕಾರಿಯಾಗಿವೆ. ಆ ದಿಸೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ನಿತ್ಯ ವಚನಗಳು ಓದುವಂತೆ ಪ್ರೇರೆಪಿಸಬೇಕು’ ಎಂದು ಹೇಳಿದರು.

ADVERTISEMENT

‘ ಶರಣರ ನಾಡು ಅಭಿವೃದ್ಧಿಪಡಿಸಿ ಇಲ್ಲಿಯ ಆದರ್ಶ ವಿಚಾರ ಜಗತ್ತಿಗೆ ಮುಟ್ಟಬೇಕು. ಈ ನಿಟ್ಟಿನಲ್ಲಿ ₹ 600 ಕೋಟಿ ವೆಚ್ಚದಲ್ಲಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸದ್ಯ ₹ 100 ಕೋಟಿ ಬಿಡುಗಡೆ ಮಾಡಿ ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

‘ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಬಹು ವರ್ಷಗಳ ಬೇಡಿಕೆಯಾದ ನಾಗರಿಕ ವಿಮಾನಯಾನ ಇಂದು ಆರಂಭಗೊಂಡಿದೆ. ಈ ಕಾರ್ಯಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ವಿಮಾನಯಾನ ಆರಂಭದಿಂದ ಇಲ್ಲಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ. ಬಂಡವಾಳ ಹರಿದು ಬಂದು ಯುವಕರಿಗೆ ಉದ್ಯೋಗಾವಕಾಶ ಹೆಚ್ಚಲಿವೆ’ ಎಂದು ತಿಳಿಸಿದರು.

ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಮಾತನಾಡಿ,‘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಭಾಗದ ಮೇಲೆ ತುಂಬಾ ಅಭಿಮಾನ ಇದೆ. ಅವರು ಮುಖ್ಯಮಂತ್ರಿಯಾಗುತ್ತಲೇ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರು. ಅನುಭವ ಮಂಟಪಕ್ಕೆ ₹ 100 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಬೀದರ್ ರಂಗಮಂದಿರಕ್ಕೆ ಚನ್ನಬಸವ ಪಟ್ಟದ್ದೇವರ ಹೆಸರು ನಾಮಕರಣ ಮಾಡಿದ್ದು ಎಲ್ಲರಿಗೂ ಸಂತಸ ತಂದಿದೆ’ ಎಂದು ಹೇಳಿದರು.

ಮುಂಡರಗಿಯ ತೋಂಟಾದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಕ್ಕ ಗಂಗಾಂಬಿಕೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ,ಶಾಸಕರಾದ ರಹೀಂಖಾನ್, ಬಿ. ನಾರಾಯಣರಾವ್, ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್,ಮುಖಂಡರಾದ ಡಿ.ಕೆ.ಸಿದ್ರಾಮ, ಬಾಬುವಾಲಿ, ಶೈಲೇಂದ್ರ ಬೆಲ್ದಾಳೆ, ಗುರುನಾಥ ಕೊಳ್ಳೂರ್, ಧನರಾಜ ತಾಳಂಪಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.