
ಬೀದರ್: ಶಾಲಾ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಶುಕ್ರವಾರ ತಾಲ್ಲೂಕಿನ ಜನವಾಡದ ಗುರುನಾನಕ್ ಶಾಲೆಗೆ ಭೇಟಿ ನೀಡಿದರು.
ಘಟನೆ ನಡೆದ ಸ್ಥಳ ಪರಿಶೀಲಿಸಿ, ವಿದ್ಯಾರ್ಥಿನಿ ಮೇಲೆ ಹರಿದು ಹೋದ ಬಸ್ ವೀಕ್ಷಿಸಿದರು. ಬಸ್ನಲ್ಲಿ ಜಿಪಿಎಸ್ ವ್ಯವಸ್ಥೆ, ಕ್ಯಾಮೆರಾ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಬಸ್ಸಿನಲ್ಲಿ ಆಯಾ ವ್ಯವಸ್ಥೆ ಕೂಡ ಇಲ್ಲದಿರುವುದು ಗಮನಕ್ಕೆ ಬಂತು. ಅಲ್ಲಿಯೇ ಇದ್ದ ಡಿಡಿಪಿಐ ಸುರೇಶಗೌಡ ಹಾಗೂ ಆರ್ಟಿಒ ಆರ್. ಕೆ. ಬಿರಾದಾರಗೆ ಕೆಲವು ಸೂಚನೆ ನೀಡಿದರು.
‘ಎಲ್ಲಾ ವಾಹನಗಳಲ್ಲಿ ಕಡ್ಡಾಯವಾಗಿ ಜಿಪಿಎಸ್, ಕ್ಯಾಮೆರಾ ಹಾಗೂ ಆಯಾ ಇರುವಂತೆ ಕ್ರಮ ಕೈಗೊಳ್ಳಬೇಕು’ ಎಂದರು.
‘ವಿದ್ಯಾರ್ಥಿನಿ ಕ್ಷೇಮಾಭಿವೃದ್ಧಿ ನಿಧಿಯಿಂದ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಪ್ರತಿ ತಿಂಗಳು ₹4 ಸಾವಿರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಇದಕ್ಕೂ ಮುನ್ನ ಔರಾದ್ ತಾಲ್ಲೂಕಿನ ಗಡಿಕುಶನೂರ ಗ್ರಾಮಕ್ಕೆ ತೆರಳಿ ಮೃತ ವಿದ್ಯಾರ್ಥಿನಿಯ ತಂದೆ ಸುನೀಲಕುಮಾರ ಹಾಗೂ ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು.
ಡಿ. 9ರಂದು ಶಾಲಾ ವಾಹನ ಡಿಕ್ಕಿ ಹೊಡೆದು 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಋತ್ವಿಕಾ (9) ಮೃತಪಟ್ಟಿದ್ದಳು. ಈ ಸಂಬಂಧ ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿಸಿಪಿಒ ರೂಪ, ಸಿಡಿಪಿಒಗಳಾದ ಇಮಾಲಪ್ಪ, ಶಾರದಾ ಕಲಮರಕರ ಇತರರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.