ಚಿಟಗುಪ್ಪ: ‘ವ್ಯಕ್ತಿಗೆ ವಿಶ್ವದ ಪರಿಚಯ ಆಗುವುದು ಆತನ ಮಾತೃಭಾಷೆಯಿಂದ ಮಾತ್ರ ಹಾಗೂ ಜೀವನದ ಅರಿವೂ ಮೂಡಿಸುವುದು ಕೂಡ ಮಾತೃ ಭಾಷೆಯೆ ಆಗಿರುತ್ತದೆ’ ಎಂದು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪನಿರ್ದೇಶಕ ಡಾ.ಸಂತೋಷ ಹಾನಗಲ್ ಹೇಳಿದರು.
ಪಟ್ಟಣದ ಆರ್ಯ ಸಮಾಜ ಮಂದಿರದಲ್ಲಿ ಶನಿವಾರ ನಡೆದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಆತ್ಮ ವಿಶ್ವಾಸ ಹಾಗೂ ಸಾಮರ್ಥ್ಯ ಇರುವವರು ಯಾವುದೇ ಭಾಷೆ ಕಲಿಯುವ ಮೂಲಕ ವಿಶ್ವ ಖ್ಯಾತಿ ಪಡೆಯಲು ಸಾಧ್ಯ. ಮುಖ್ಯವಾಗಿ ಅನ್ಯ ಭಾಷೆಗಿಂತಲೂ ಮಾತೃ ಭಾಷೆಯ ಮೂಲಕ ಹೆಚ್ಚಿನ ಜ್ಞಾನ, ಸಂವಹನ ಸಂಪರ್ಕ ಸಾಧಿಸುವುದು ತೀರ ಸರಳವಾಗಿದೆ. ಗಡಿ ಭಾಗದ ಕನ್ನಡಿಗರ ಸಮಸ್ಯೆ ಸವಾಲುಗಳ ಬಗ್ಗೆ ಸರ್ಕಾರ ಆಳವಾದ ಅಧ್ಯಯನ ಮಾಡಬೇಕಿದೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಮಾತನಾಡಿ, ‘ಪಟ್ಟಣವೂ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಸಾಹಿತ್ಯ ಸಮ್ಮೇಳನಗಳು ನಡೆಸಿದ ಕೀರ್ತಿಗೆ ಪಾತ್ರವಾಗಿದ್ದು, ಪ್ರಥಮ ತಾಲ್ಲೂಕು ಮಟ್ಟದ ಸಮ್ಮೇಳವೂ ಯಶಸ್ವಿಯಾಗಿ ನಡೆಸಿರುವುದು ರಾಜ್ಯಕ್ಕೆ ಮಾದರಿ ಎನಿಸಿದೆ’ ಎಂದು ತಿಳಿಸಿದರು.
ನಿಕಟ ಪೂರ್ವ ಅಧ್ಯಕ್ಷ ಎಸ್.ವಿ.ಕಲ್ಮಠ ಅವರಿಂದ ನಾಡ ಧ್ವಜ ಹಸ್ತಾಂತರಿಸಲಾಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕವಿಗೋಷ್ಠಿ ನಡೆದವು.
ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ಕನಕ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಗೊಂಡ್, ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ್ ರಾಜಪುರೋಹಿತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರಡ್ಡಿ, ಸಾರಿಕಾ ಗಂಗಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಪ್ಪ ಜಮಾದಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಬೆಲೂರೆ, ರಾಜಕುಮಾರ ಪಸಾರ್, ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಪಾಟೀಲ ಪಾಲ್ಗೊಂಡಿದ್ದರು.
ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ ಸಿಂಧೆ ಸ್ವಾಗತಿಸಿದರು. ರಮೇಶ್ ಸಲಗರ್ ನಿರೂಪಿಸಿದರು. ರಾಜಶೇಖರ್ ಉಪ್ಪಿನ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.