ADVERTISEMENT

ಚಿಟಗುಪ್ಪ: 220 ವಿದ್ಯಾರ್ಥಿನಿಯರಿಗೆ ಒಂದೇ ಶೌಚಾಲಯ, ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 6:24 IST
Last Updated 27 ಡಿಸೆಂಬರ್ 2025, 6:24 IST
ಚಿಟಗುಪ್ಪ ಪಟ್ಟಣದ ಸರ್ಕಾರಿ ಕನ್ಯಾಪ್ರೌಢ ಶಾಲೆಯಲ್ಲಿನ ಶೌಚಾಲಯ ಸುತ್ತಲೂ ಬೆಳೆದಿರುವ ಮುಳ್ಳಿನ ಹುಲ್ಲು 
ಚಿಟಗುಪ್ಪ ಪಟ್ಟಣದ ಸರ್ಕಾರಿ ಕನ್ಯಾಪ್ರೌಢ ಶಾಲೆಯಲ್ಲಿನ ಶೌಚಾಲಯ ಸುತ್ತಲೂ ಬೆಳೆದಿರುವ ಮುಳ್ಳಿನ ಹುಲ್ಲು    

ಚಿಟಗುಪ್ಪ (ಹುಮನಾಬಾದ್): ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಸೂಕ್ತ ಶೌಚಾಲಯ ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುತ್ತಿದ್ದಾರೆ.

8ರಿಂದ 10ನೇ ತರಗತಿವರೆಗಿನ ಶಾಲೆಯಲ್ಲಿ ಒಟ್ಟು 220 ವಿದ್ಯಾರ್ಥಿನಿಯರು ಹಾಗೂ 7 ಜನ ಶಿಕ್ಷಕಿಯರು ಇದ್ದಾರೆ. ಇವರೆಲ್ಲರೂ ಶೌಚಾಲಯ ಬಳಸಲು ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಇದೆ.

‘ಕೆಲ ವಿದ್ಯಾರ್ಥಿನಿಯರಿಗೆ ಶೌಚಾಲಯ ಬಳಸಲು ಸಮಯ ಸಿಗದೆ ಹಾಗೆಯೇ ತರಗತಿಗೆ ಹೋಗುತ್ತಾರೆ’ ಎಂದು ಶಾಲೆ ಶಿಕ್ಷಕಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಮ್ಮ ಶಾಲೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರೂ ಸೂಕ್ತ ಶೌಚಾಲಯ ಸೌಲಭ್ಯ ಇಲ್ಲದೆ ಪಾಲಕರು ಕಿರಿಕಿರಿ ಮಾಡುತ್ತಿದ್ದಾರೆ. 12ರಿಂದ 15 ವರ್ಷಗಳ ಹಿಂದೆ ಒಂದು ಸಣ್ಣ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಅದನ್ನು ಕೇವಲ ಮೂವರು ಬಳಸಬಹದು. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಎಲ್ಲ 220 ವಿದ್ಯಾರ್ಥಿನಿಯರು ಹೊರಗೆ ಬರುತ್ತಾರೆ. ಅವರೆಲ್ಲ ಎಲ್ಲಿಗೆ ಹೋಗಬೇಕು’ ಎಂಬುದು ಶಿಕ್ಷಕರು, ಸಿಬ್ಬಂದಿಯ ಪ್ರಶ್ನೆ. 

ಶೌಚಾಲಯ ಕೊರತೆ ಬಗ್ಗೆ ಪಾಲಕರೂ ಆಗಾಗ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳಿದ್ದರೂ ಅವರಿಗೆ ಸೂಕ್ತ ಶೌಚಾಲಯ ಸೌಲಭ್ಯ ಕಲ್ಪಿಸಿಲ್ಲ‌. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಶೌಚಾಲಯ ನಿರ್ಮಾಣ ಮಾಡಬೇಕು’ ಎಂದು ಮುಖಂಡ ವೀರೇಶ್ ಆಗ್ರಹಿಸಿದ್ದಾರೆ.

ಶೌಚಾಲಯ ಸಮಸ್ಯೆ ಬಗ್ಗೆ ಈಗಾಗಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೊಸ ಶೌಚಾಲಯ ನಿರ್ಮಾಣ ಆದರೆ ಉಪಯುಕ್ತ 
ಬಸವರಾಜ ಮೇತ್ರೆ ಶಾಲೆಯ ಮುಖ್ಯಶಿಕ್ಷಕ 
ನಮ್ಮ ಶಾಲೆಯಲ್ಲಿ ಅನೇಕ ವರ್ಷಗಳಿಂದ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಇನ್ನೊಂದು ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಬೇಕು 
ಭಾಗ್ಯಶ್ರೀ ವಿದ್ಯಾರ್ಥಿನಿ 
ಶಾಲೆಯ ಆವರಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಮನೆಯಿಂದ ಶಾಲೆಗೆ ಬಂದು ಹೋಗುವಾಗ‌ ನಾಯಿಗಳ ಭಯ ಕಾಡುತ್ತಿದೆ
ಅಂಬಿಕಾ ವಿದ್ಯಾರ್ಥಿನಿ 

ಬೀದಿ ನಾಯಿಗಳ ಕಾಟ

ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಯಾವುದೇ ಬೀದಿಗೆ ಹೋದರೂ ಮೂರ್ನಾಲ್ಕು ನಾಯಿಗಳ ಹಿಂಡು ಕಂಡು ಬರುತ್ತದೆ. ಶಾಲೆಯ ಪ್ರವೇಶ ದ್ವಾರ ಆಟದ ಮೈದಾನಗಳಲ್ಲೂ ಇವುಗಳ ಕಾಟ ತಪ್ಪಿದಲ್ಲ. ನಾವು ಭಯದಲ್ಲೇ ಶಾಲೆಗೆ ಹೋಗಿ ಬರುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು. ನಡು ರಸ್ತೆಯಲ್ಲಿಯೇ ಮಲಗುವ ನಾಯಿಗಳು ವಾಹನಗಳು ಹಿಂಬಾಲಿಸಿಕೊಂಡು ಹೋಗಿ ಸವಾರರಿಗೆ ಭಯ ಹುಟ್ಟಿಸುತ್ತಿವೆ. ಇವುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಅನೇಕರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಬಸವೇಶ್ವರ ವೃತ್ತ ಗಾಂಧಿ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿಯೇ ಬೀಡು ಬಿಡುವ ನಾಯಿಗಳು ಅಡ್ಡಾದಿಡ್ಡಿ ಓಡಾಡುತ್ತ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದರ ಜತೆ ರಾತ್ರಿ ವೇಳೆ ತಿರುಗಾಟಕ್ಕೂ ಭಯ ಬೀಳುವಂತೆ ಮಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.