ಬೀದರ್: ಸೇಂಟ್ ಜೋಸೆಫ್ ಕೆಥೋಲಿಕ್ ಚರ್ಚ್ ಹಾಗೂ ಸೆಕ್ರೇಡ್ ಹಾರ್ಟ್ ಚರ್ಚ್ ವತಿಯಿಂದ ನಗರದಲ್ಲಿ ಶ್ರದ್ಧಾ, ಭಕ್ತಿಯಿಂದ ‘ಶುಭ ಶುಕ್ರವಾರ’ ಆಚರಿಸಲಾಯಿತು.
ಕ್ರೈಸ್ತರು ಯೇಸುವಿನ ಪ್ರಾಣ ತ್ಯಾಗದ ಪವಿತ್ರ ಸ್ಮರಣೆಯ ಶಿಲುಬೆ ಹಾದಿಯ ಪ್ರಾರ್ಥನಾ ವಿಧಿಯನ್ನು ಭಕ್ತಿಯಿಂದ ನೆರವೇರಿಸಿದರು. ಕೈಯಲ್ಲಿ ಶಿಲುಬೆಗಳನ್ನು ಹಿಡಿದುಕೊಂಡು ನಗರದ ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಶಾಲೆ ಮೈದಾನದಿಂದ ಮೆರವಣಿಗೆ ಆರಂಭಿಸಿದರು. ಜನರಲ್ ಕಾರ್ಯಪ್ಪ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಭಗತ್ ಸಿಂಗ್ ವೃತ್ತ, ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಹರಳಯ್ಯ ವೃತ್ತ, ಗುದಗೆ ಆಸ್ಪತ್ರೆ ಕ್ರಾಸ್, ರೋಟರಿ ಕನ್ನಡಾಂಬೆ ವೃತ್ತದ ಮಾರ್ಗವಾಗಿ ಹಾಯ್ದು ಪುನಃ ಸಾಯಿ ಶಾಲೆಗೆ ಬಂದು ಸೇರಿದರು.
ಮೆರವಣಿಗೆಯಲ್ಲಿ ಚಲಿಸುವ ಟ್ರ್ಯಾಕ್ಟರ್ನಲ್ಲಿ ಪ್ರದರ್ಶಿಸಿದ ಯೇಸು ಅವರ ಜೀವನದ ಅಂತಿಮ ಗಳಿಗೆಯ ರೂಪಕ ಗಮನ ಸೆಳೆಯಿತು. ಏಳು ಸ್ಥಳಗಳಲ್ಲಿ ಯೇಸು ಅವರು ಶಿಲುಬೆಯಲ್ಲಿ ನುಡಿದ ಏಳು ನುಡಿಗಳನ್ನು ಹೇಳಲಾಯಿತು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್, ಕಾಂಗ್ರೆಸ್ ಮುಖಂಡ ಶ್ರೀಮಂತ ಸೂರ್ಯವಂಶಿ, ಕೆಥೋಲಿಕ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಸುರೇಶ ಎನ್. ದೊಡ್ಡಿ, ಫಾದರ್ ವಿಲ್ಸನ್, ಫಾದರ್ ಜೋನ್ ಪೌಲ್, ಫಾದರ್ ವಿನ್ಸೆಂಟ್, ಕನ್ಯಾಭಗಿನಿ, ಸಿಸ್ಟರ್ ಕ್ರಿಸ್ಟಿನಾ ಜಮಗಿ ಕಾಲೊನಿ, ಶಾಂತಕುಮಾರ, ಅರುಣ ಪೌಲ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.