ಬೀದರ್: ರೆವರೆಂಡ್ ಡಾ. ಜೆ.ಟಿ. ಸಿಮಂಡ್ಸ್ ಕನ್ನಡ ಸಾಹಿತ್ಯ ಸಂಘವು ನಗರದ ಮಂಗಲಪೇಟ್ ಚರ್ಚ್ನಲ್ಲಿ ಶುಕ್ರವಾರ ಸಂಜೆ ಜೆ. ಎಫ್. ಫ್ಲಿಟ್ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿತ್ತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಉದ್ಘಾಟಿಸಿ, ಕನ್ನಡ ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳು ನೀಡಿದ ಕೊಡುಗೆ ಅಪಾರವಾದದು ಎಂದು ಹೇಳಿದರು.
ಕ್ರೈಸ್ತ ಮಿಷನರಿಗಳು ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಜೊತೆಗೆ ಕನ್ನಡ ಶಬ್ದಕೋಶ ರಚನೆ, ವ್ಯಾಕರಣ, ಹಸ್ತಪ್ರತಿ ಸಂಗ್ರಹ, ಅವುಗಳನ್ನು ಶಾಸ್ತ್ರಿಯವಾಗಿ ಸಂಪಾದಿಸುವ ಮಹತ್ವದ ಕಾರ್ಯ ಮಾಡಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸೇಂಟ್ ಪೌಲ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚಿನ (ಉತ್ತರ) ಸಭಾಪಾಲಕ ರೆವರೆಂಡ್ ಎಸ್. ಎಲ್. ತುಕಾರಾಮ ಮಾತನಾಡಿ, ಕ್ರೈಸ್ತ ಮಿಷನರಿಗಳು ಮತ್ತು ಅಧಿಕಾರಿಗಳು ಸತಿ ಸಹಗಮನ ಪದ್ಧತಿ, ಜಾತೀಯತೆಯನ್ನು ಹೋಗಲಾಡಿಸಲು ಶ್ರಮಿಸಿದ್ದರು. ಜನರಲ್ಲಿ ಭಾತೃತ್ವ ಭಾವನೆ ಬೆಳೆಸಿದರು ಎಂದು ತಿಳಿಸಿದರು.
ಜೆ. ಎಫ್. ಫ್ಲಿಟ್ ಕುರಿತು ವಿಶೇಷ ಉಪನ್ಯಾಸ ನೀಡಿದ ಬೀದರ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ರಾಜಕುಮಾರ ಅಲ್ಲೂರೆ ಮಾತನಾಡಿ, ಬಿ. ಎಲ್. ರೈಸ್ ಮತ್ತು ಜೆ. ಎಫ್. ಫ್ಲಿಟ್ ಕನ್ನಡ ಶಾಸನ ಕ್ಷೇತ್ರದ ಇಬ್ಬರು ದೇವತೆಗಳು ಎಂದರು.
ಬಹುಮುಖ ಪ್ರತಿಭೆಯ ಫ್ಲಿಟ್ ಅವರಿಗೆ ಅನೇಕ ಭಾಷೆಗಳ ಅರಿವಿತ್ತು. ಜೊತೆಗೆ ಹಲವು ಜ್ಞಾನ ಶಿಸ್ತುಗಳ ಬಗ್ಗೆ ಅಪಾರ ಪಾಂಡಿತ್ಯ ಇತ್ತು. ಇತಿಹಾಸ, ಶಾಸನ, ನಾಣ್ಯಶಾಸ್ತ್ರ, ತರ್ಕಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಸಾಕಷ್ಟು ತಿಳುವಳಿಕೆ ಇತ್ತು. ಅವರಿಗೆ ಶಾಸನಗಳ ಸಂಗ್ರಹ-ಸಂಪಾದನೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಮೌಲ್ಯಾಧಾರಿತ ಕೊಡುಗೆ ನೀಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
ರೆವರೆಂಡ್ ಡಾ. ಜೆ.ಟಿ. ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಿ.ಕೆ. ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು. ಮನೋಹರ ಮೇತ್ರೆ, ಜೈಭಾರತ ಮಂಗೇಶ್ಕರ್, ಸಂಜೀವಕುಮಾರ ಕೋಹಿನೂರ ಹಾಗೂ ಕರ್ನಾಟಕ ರಾಜ್ಯ ರೇಡಿಯೋಲಾಜಿಸ್ಟ್ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಟಿ. ಎಂ. ಮಚ್ಚೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಧನರಾಜ ತುಡಮೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರೆವರೆಂಡ್ ಸಿಮೋನ್ ಮಾರ್ಕ್, ಶಂಭುಲಿಂಗ ವಾಲ್ದದೊಡ್ಡಿ, ಜೇಕಬ್, ಬಸವರಾಜ ಬಲ್ಲೂರ, ಈಶ್ವರಯ್ಯ ಕೊಡಂಬಲ್, ಮೇರಿ, ಜಗನಾಥ ಕಮಲಾಪೂರೆ, ಯೇಶಪ್ಪ ತುಡಮೆ, ಭೀಮಣ್ಣ ಅಷ್ಟೂರ, ಶರಣಪ್ಪ ಸಿಂಗಾರೆ, ಟಿ. ಜೆ. ಹಾದಿಮನಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.