ADVERTISEMENT

ಬೀದರ್‌: ರಾಜ್ಯಪಾಲರ ವಿರುದ್ಧ ಕ್ರೈಸ್ತರ ವೇದಿಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 15:48 IST
Last Updated 23 ಆಗಸ್ಟ್ 2024, 15:48 IST
ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆಯವರು ಬೀದರ್‌ನಲ್ಲಿ ರಾಜ್ಯಪಾಲರ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಿದರು
ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆಯವರು ಬೀದರ್‌ನಲ್ಲಿ ರಾಜ್ಯಪಾಲರ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಿದರು   

ಬೀದರ್‌: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರ ನಡೆ ವಿರೋಧಿಸಿ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆಯವರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಆನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಷ್ಟ್ರಪತಿ ಅವರ ಹೆಸರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

ಮುಡಾ ವಿಷಯದಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲ. ಖಾಸಗಿ ದೂರಿನನ್ವಯ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಶೋಕಾಸ್‌ ನೋಟಿಸ್‌ ಕೊಟ್ಟು ದುಡುಕಿದ್ದಾರೆ. ಅದಾದ ಬಳಿಕ ಈಗ ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ಕೊಟ್ಟಿದ್ದಾರೆ. ರಾಜ್ಯಪಾಲರಿಗೆ ಇಂತಹ ಹಲವು ದೂರುಗಳು ಹಲವು ಮುಖಂಡರ ವಿರುದ್ಧ ಸಲ್ಲಿಕೆಯಾಗಿವೆ. ಆದರೆ, ಅವುಗಳನ್ನು ಪರಿಗಣಿಸದೆ ಸಿ.ಎಂ ವಿರುದ್ಧದ ದೂರು ಮಾತ್ರ ಪರಿಗಣಿಸಿದ್ದಾರೆ. ಇದು ಏಕಪಕ್ಷೀಯ ಹಾಗೂ ದ್ವೇಷದ ರಾಜಕಾರಣ. ಈ ಕ್ರಮದಿಂದ ರಾಜ್ಯದ ಜನತೆಗೆ ರಾಜ್ಯಪಾಲರು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಬಿಜೆಪಿ ಮುಖಂಡರಾದ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಜನಾ‌ರ್ದನ ರೆಡ್ಡಿ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಹಾಗೂ ಎಸ್‌ಐಟಿ ಚಾರ್ಜ್‌ಶೀಟ್‌ ಸಲ್ಲಿಸಿವೆ. ಒಂಬತ್ತು ತಿಂಗಳಿಂದ ರಾಜ್ಯಪಾಲರ ಒಪ್ಪಿಗೆಯ ನಿರೀಕ್ಷೆಯಲ್ಲಿವೆ. ಆದರೆ, ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ. ಕೇಂದ್ರದ ಅಣತಿಯಂತೆ ನಡೆದುಕೊಂಡಿದ್ದಾರೆ. ಕೂಡಲೇ ಅವರನ್ನು ವಾಪಸ್‌ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ರಾಜೇಶ ಜೋತಿ, ಸಂಸ್ಥಾಪಕ ಭಾಸ್ಕರ್ ಬಾಬು ಎಂ.ಪಾತರಪಳ್ಳಿ , ಜಿಲ್ಲಾ ಕಾರ್ಯಾಧ್ಯಕ್ಷ ಸ್ಯಾಮಸನ್ ಹಿಪ್ಪಳಗಾಂವ್‌, ಜಿಲ್ಲಾ ಉಪಾಧ್ಯಕ್ಷ ನರಸಿಂಗ್‌ ಮಿರ್ಜಾಪೂರ, ರಾಜ್ಯ ಉಪಾಧ್ಯಕ್ಷ ಪ್ರಕಾಶ ಕೋಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ ಹಿರೇಮನಿ, ಸಾಲೊಮನ್ ಡಾಕುಳಗಿಕರ್, ಮಹಿಳಾ ಘಟಕದ ಅಧ್ಯಕ್ಷೆ ಸುಕಿರ್ತಾ ವಗ್ಗೆ, ಸಂತೋಷಿ ಎಸ್., ರಾಜಕುಮಾರ ಸಿ., ಕೆ.ಎಸ್.ಶಾಂತಕುಮಾರ, ದಶರಥ ಮೀಸೆ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.