ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಕೊಂಗಳಿ ಗ್ರಾಮದ ಜಮೀನಿನಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುವ ಬಿಳಿಜೋಳದ ಬೆಳೆ
ಹುಲಸೂರ: ಕಳೆದ ಎರಡು ಮೂರು ದಿನಗಳಿಂದ ಬೀಸುತ್ತಿರುವ ಶೀತಗಾಳಿ ಹಾಗೂ ಚಳಿಯು ಬಿಳಿಜೋಳದ ಬೆಳೆಗೆ ವರವಾಗಿ ಪರಿಣಮಿಸಿದೆ. ಇದರಿಂದಾಗಿ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ 1,096 ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆಯಾಗಿದೆ. ಹಿಂಗಾರು ಹಂಗಾಮಿನ ಬಿಳಿಜೋಳ ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.
ರಾಸಾಯನಿಕ ಗೊಬ್ಬರದ ನೆರವಿಲ್ಲದೆ ಹಾಗೂ ಮಳೆಯ ನಿರೀಕ್ಷೆಯಿಲ್ಲದೆ ಜೋಳ ಕೇವಲ ಚಳಿ ಮತ್ತು ಇಬ್ಬನಿಯಿಂದ ಬೆಳೆಯುತ್ತದೆ. ಕಳೆದ ಎರಡು–ಮೂರು ದಿನಗಳಿಂದ ಬೀಸುತ್ತಿರುವ ಶೀತಗಾಳಿ ಹಾಗೂ ಚಳಿಯು ಬಿಳಿಜೋಳದ ಇಳುವರಿ ಹೆಚ್ಚಳಕ್ಕೆ ಸಹಕಾರಿಯಾಗಿ ಪರಿಣಮಿಸಿದೆ. ಈಗಾಗಲೇ ಜೋಳ ಹುಲುಸಾಗಿ ಬೆಳೆದಿದೆ. ಒಂದೂವರೆ ತಿಂಗಳ ಹೊತ್ತಿಗೆ ಜೋಳ ತೆನೆ ಕಟ್ಟುವ ಹಂತಕ್ಕೆ ಬರಲಿದೆ ಎಂದು ರೈತರು ಹೇಳುತ್ತಾರೆ.
ಈ ಭಾಗದ(ಕಲ್ಯಾಣ ಕನಾರ್ಟಕದ) ಜನರು ಬಿಳಿ ಜೋಳದ ರೊಟ್ಟಿಯನ್ನು ಹೆಚ್ಚಾಗಿ ಊಟ ಮಾಡುವುದರಿಂದ ಹಾಗೂ ಜಾನುವಾರುಗಳಿಗೆ ಜೋಳದ ದಂಟು(ಕಣಿಕೆ) ಬೇಕಾಗಿರುವುದರಿಂದ ಬಹಳಷ್ಟು ರೈತರು ತಮ್ಮ ಜಮೀನುಗಳಲ್ಲಿ ಬೆಲೆ ಕಡಿಮೆಯಿದ್ದರೂ ಬಿಳಿ ಜೋಳವನ್ನು ಬೆಳೆಯುತ್ತಾರೆ.
ಬಂಪರ್ ಬೆಲೆ: ಕಳೆದ ವರ್ಷ ಕ್ವಿಂಟಲ್ ಬಿಳಿಜೋಳವು ಸುಮಾರು ₹ 5,500 ರಿಂದ ₹ 6,000ಕ್ಕೆ ಮಾರಾಟವಾಗಿತ್ತು. ಬಿಳಿಜೋಳವನ್ನು ಬೆಳೆದ ರೈತರಿಗೆ ಕೈತುಂಬಾ ಹಣ ಬಂದಿತ್ತು. ಆದರೆ ಬಿಳಿಜೋಳ ಪ್ರಸ್ತುತ ಕ್ವಿಂಟಲ್ಗೆ ₹3,000 ರಿಂದ ₹3500 ಕ್ಕೆ ಮಾರಾಟವಾಗುತ್ತಿದೆ.
ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಮೀನಿನಲ್ಲಿ ನೀರು, ತೇವಾಂಶ ಹೆಚ್ಚಾದ ಕಾರಣ ಜೋಳ ಬಿತ್ತನೆ ವಿಳಂಬವಾಗಿತ್ತು. ಕೇವಲ ನಾಲ್ಕೂವರೆ ತಿಂಗಳಲ್ಲಿ ಬರುವ ಬಿಳಿ ಜೋಳ ಈ ಭಾಗದ ರೈತರು ಪಾಲಿಗೆ ಅಮೃತವರ್ಷಿಣಿಯಾಗಿದೆ.
ಶೀತ ಗಾಳಿ ಬೀಸುತ್ತಿರುವುದರಿಂದ ಬಿಳಿ ಜೋಳಕ್ಕೆ ಅನುಕೂಲವಾಗಿದೆ. ಇದರಿಂದ ಇಳುವರಿಯು ಹೆಚ್ಚಾಗಿ ತೆನೆಗಳು ದಪ್ಪವಾಗುತ್ತವೆ. ದನಗಳಿಗೂ ಮೇವಿನ ಕೊರತೆ ಉಂಟಾಗುವುದಿಲ್ಲಸುನಿಲ ಕುಲಕರ್ಣಿ, ರೈತ
ಶೀತಗಾಳಿಯಿಂದ ಜೋಳದ ಬೆಳೆಗೆ ಉತ್ತಮವಾಗಿದೆ. ಬಿಳಿಜೋಳಕ್ಕೆ ತಂಪಾದ ಗಾಳಿ ಹಾಗೂ ಇಬ್ಬನಿಯಿಂದ ಮಳೆ ಬರದಿದ್ದರೂ ತೆನೆಗಳಲ್ಲಿ ಕಾಳು ಕಟ್ಟುವ ಪ್ರಮಾಣ ಹೆಚ್ಚಾಗುತ್ತದೆಗೌತಮ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.