ಬಸವ ಸಂಸ್ಕೃತಿ ಅಭಿಯಾನ
ಬೀದರ್: ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತು ಬಸವ ಸಂಸ್ಕೃತಿ ಅಭಿಯಾನ ಜಿಲ್ಲಾ ಸಮಿತಿಯು ಸಂವಿಧಾನ ವಿರೋಧಿ ಕರಪತ್ರಗಳನ್ನು ಮುದ್ರಿಸಿ, ಹಂಚುತ್ತಿರುವುದು ಖಂಡನಾರ್ಹ’ ಎಂದು ಜಿಲ್ಲಾ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಈ ಕುರಿತು ಶನಿವಾರ ಪ್ರಕಟಣೆ ಹೊರಡಿಸಿದ್ದು, ರಾಜ್ಯದಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಸುತ್ತಿರುವುದು ಸಂತೋಷದ ಸಂಗತಿ. ಆದರೆ, ಕರಪತ್ರಗಳ ಮೂಲಕ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಭಾರತದ ಸಂವಿಧಾನಕ್ಕಿಂತ ವಿಶ್ವಕ್ಕೆ ಮಾದರಿಯಾಗುವಂತಹ ವಿಷಯಗಳು ಬಸವಣ್ಣನವರು ಕೊಟ್ಟ ವಚನ ಸಂವಿಧಾನದಲ್ಲಿವೆ ಎಂದು ಮುದ್ರಿಸಿರುವುದು ಸೂಕ್ತವಲ್ಲ ಎಂದು ಎರಡೂ ಸಂಘಟನೆಗಳ ಮುಖಂಡರು ತಿಳಿಸಿದ್ಧಾರೆ.
ಕಳೆದ 75 ವರ್ಷಗಳಿಂದ ಈ ದೇಶದ ದಲಿತ ಸಂಘಟನೆಗಳು ಬುದ್ಧ, ಬಸವ, ಅಂಬೇಡ್ಕರ್ ಚಳವಳಿಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಹೋರಾಟ ನಡೆಸುತ್ತಿವೆ. ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಪ್ರಚಾರದ ಮೂಲಕ ಬೆಳೆಸುತ್ತಿವೆ. ಆದರೆ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಬಸವ ಸಂಸ್ಕೃತಿ ಅಭಿಯಾನ ಸಮಿತಿಯ ಅಧ್ಯಕ್ಷ ಬಸವರಾಜ ಧನ್ನೂರ ಅವರ ಹೆಸರಿನಲ್ಲಿ ಹೊರಡಿಸಿರುವ ಕರಪತ್ರದಲ್ಲಿ ಸಂವಿಧಾನದ ಆದರ್ಶಗಳಿಗೆ ವಿರುದ್ಧವಾಗಿ ಮುದ್ರಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ಮತ್ತು ಸಂಸ್ಥೆಗಳ ವಿರುದ್ಧ ಎಚ್ಚರಿಕೆ ನೀಡಿದಂತೆ ಮಹಾತ್ಮ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸುವ ಸಂವಿಧಾನದ ಪ್ರಾಮಾಣಿಕತೆಗೆ ವಿರುದ್ಧವಾಗಿ ಈ ಕರಪತ್ರಗಳನ್ನು ಮುದ್ರಿಸಿ ಪ್ರಚಾರ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ರೀತಿಯ ಬೆಳವಣಿಗೆಗಳಿಂದ ಸಮಾಜದ ಶಾಂತಿ, ಸೌಹಾರ್ದ ಮತ್ತು ಸಾಂಸ್ಕೃತಿಕ ಸಮಾನತೆಗೆ ಹಾನಿಯಾಗುತ್ತದೆ. ಕೂಡಲೇ ಸಂವಿಧಾನದ ಆಶಯ ಮತ್ತು ದೇಶದ ಜನರ ಸಮ್ಮಾನದಂತೆ ಕರಪತ್ರ ಪರಿಷ್ಕರಿಸಿ ಮರು ಮುದ್ರಣ ಮಾಡಬೇಕೆಂದು ಮುಖಂಡರಾದ ಶ್ರೀಪತರಾವ ದೀನೆ, ಅಶೋಕ ಮಾಳಗೆ, ಶಿವಕುಮಾರ ನೀಲಿಕಟ್ಟಿ, ಅಂಬಾದಾಸ ಗಾಯಕವಾಡ, ಪ್ರದೀಪ ನಾಟೇಕರ್, ಸಂದೀಪ ಕಾಂಟೆ, ರಮೇಶ ಪಾಸ್ವಾನ್, ರಮೇಶ ಮಂದಕನಳ್ಳಿ, ಅವಿನಾಶ ದೀನೆ, ಸಾಯಿ ಸಿಂಧೆ, ಬಾಬು ಮಿಠಾರೆ, ನರಸಿಂಗ ಸಾಮ್ರಾಟ್, ಗೌತಮ ಭೋಸ್ಲೆ, ಮಲ್ಲಿಕಾರ್ಜುನ ಮೋಳಕೇರಿ, ಶಾಲಿವಾನ ಬಡಿಗೇರ್, ಅಂಬೇಡ್ಕರ್ ಸಾಗರ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.