ADVERTISEMENT

ಪತ್ರಿಕೆಗಳು ಜನಸಾಮಾನ್ಯರ ಧ್ವನಿಯಾಗಲಿ: ವೀರಭದ್ರಪ್ಪ ಉಪ್ಪಿನ

​ಪ್ರಜಾವಾಣಿ ವಾರ್ತೆ
Published 22 ಮೇ 2019, 12:14 IST
Last Updated 22 ಮೇ 2019, 12:14 IST
ಬೀದರ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕೆಗಳ ಅಧ್ಯಯನ ಮಾಲಿಕೆ – 3 ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ಪಶು ವೈದ್ಯಕೀಯ ವಿಶ್ವ ವಿದ್ಯಾಲಯದ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನ ಉದ್ಘಾಟಿಸಿದರು
ಬೀದರ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕೆಗಳ ಅಧ್ಯಯನ ಮಾಲಿಕೆ – 3 ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ಪಶು ವೈದ್ಯಕೀಯ ವಿಶ್ವ ವಿದ್ಯಾಲಯದ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನ ಉದ್ಘಾಟಿಸಿದರು   

ಬೀದರ್‌: ‘ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದೇ ಗುರುತಿಸಿಕೊಳ್ಳುವ ಮಾಧ್ಯಮಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹಾಗೂ ಸರ್ಕಾರದ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಕೆಲಸ ಮಾಡಬೇಕು. ಜನಸಾಮಾನ್ಯರ ಧ್ವನಿಯಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಕರ್ನಾಟಕ ಪಶು ವೈದ್ಯಕೀಯ ವಿಶ್ವ ವಿದ್ಯಾಲಯದ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನ ಹೇಳಿದರು.

ನಗರದಲ್ಲಿ ಬುಧವಾರ ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ಡಾ. ಕೇರ್ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕೆಗಳ ಅಧ್ಯಯನ ಮಾಲಿಕೆ –3 ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

‘ಸಂಸತ್ತು ಹಾಗೂ ಶಾಸನ ಸಭೆಯಲ್ಲಿ ಇಂದಿಗೂ ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ಚರ್ಚೆ ಮಾಡಲಾಗುತ್ತದೆ. ನ್ಯಾಯಾಲಯಗಳಲ್ಲೂ ದಾಖಲೆಯಾಗಿ ಪತ್ರಿಕಾ ವರದಿಯನ್ನು ಕೆಲವು ಸಂದರ್ಭಗಳಲ್ಲಿ ಪುರಸ್ಕರಿಸಲಾಗುತ್ತದೆ. ಮುದ್ರಣ ಮಾಧ್ಯಮಗಳು ಇಂದಿಗೂ ತನ್ನ ಅಸ್ತಿತ್ವ ಹಾಗೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿವೆ’ ಎಂದು ಹೇಳಿದರು.

ADVERTISEMENT

‘ಮೊಬೈಲ್‌ ಆ್ಯಪ್‌ಗಳ ಮೂಲಕ ಸುದ್ದಿಗಳನ್ನು ಓದುವವರ ಸಂಖ್ಯೆ ಶೇಕಡ 10 ರಷ್ಟು ಇದೆ. ವಾಟ್ಸ್್ಆ್ಯಪ್‌ನಲ್ಲಿ ಬರುವ ಎಲ್ಲ ಸುದ್ದಿಗಳು ಸತ್ಯವಾಗಿರುವುದಿಲ್ಲ. ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದು ಪತ್ರಿಕೆಗಳು ಮಾತ್ರ. ಪತ್ರಿಕೆಗಳ ಮುದ್ರಣಕ್ಕೆ ₹ 25 ರಿಂದ ₹ 30 ಖರ್ಚಾದರೂ ವಾಚಕರ ಅನುಕೂಲಕಾಗಿ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ನೈಜ ಘಟನೆಗಳನ್ನು ಅರಿತುಕೊಳ್ಳಲು ಪ್ರತಿಯೊಬ್ಬರು ಪತ್ರಿಕೆಗಳನ್ನು ಓದಬೇಕು. ವಾಸ್ತವ ಅಂಶಗಳನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿ, ‘ದಿ ಪ್ರಿಂಟರ್ಸ್ ಪ್ರಾ.ಲಿಮಿಟೆಡ್ ಸಮೂಹದ ಪ್ರಜಾವಾಣಿ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ನಿತ್ಯ ಒಂದೊಂದು ಪುರವಣಿಯನ್ನು ಕೊಟ್ಟು ಓದುಗರಿಗೆ ವಿಪುಲ ಮಾಹಿತಿಯನ್ನು ಪೂರೈಸಿ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ’ ಎಂದು ತಿಳಿಸಿದರು.

ಮಕ್ಕಳ ರೋಗ ತಜ್ಞ ಡಾ.ಸಿ. ಆನಂದರಾವ್, ‘ಜನರು ಪತ್ರಿಕೆಗಳನ್ನು ಕೊಂಡು ಓದಬೇಕು’ ಎಂದು ಸಲಹೆ ನೀಡಿದರು.

ಲಕ್ಷ್ಮಿ ನಾಗನಾಥ, ಅಂಬಣ್ಣ ಯಾದವ, ಪೂಜಾ, ಪಾರ್ವತಿ, ಅಶ್ವಿನಿ ರಡ್ಡಿ, ಲಕ್ಷ್ಮೀಬಾಯಿ, ಬಸವರಾಜ ಪಾಟೀಲ, ಸಿದ್ದು ಯಾದವ, ವಿಜಯ, ಮಹೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.