ಜನವಾಡ: ಜಿಲ್ಲೆಯಲ್ಲಿ ತರಹೆವಾರಿ ತರಕಾರಿಗಳನ್ನು ಬೆಳೆಯಲು ಪೂರಕ ವಾತಾವರಣ ಇದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದರು.
ಬೀದರ್ ತಾಲ್ಲೂಕಿನ ಜನವಾಡದ ಕೃಷಿ ವಿಜ್ಞಾನ ಕೇಂದ್ರವು ಕೆವಿಕೆ ಕೃಷಿ ಪಾಠಶಾಲೆ ಸರಣಿಯಲ್ಲಿ ರೈತರಿಗೆ ಪ್ರಮುಖ ತರಕಾರಿ ಬೆಳೆಗಳಲ್ಲಿ ಉತ್ಪಾದನಾ ತಾಂತ್ರಿಕತೆ ಕುರಿತು ಆನ್ಲೈನ್ನಲ್ಲಿ ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊಸ ತಾಂತ್ರಿಕತೆ ಅಳವಡಿಸಿಕೊಂಡು ರೈತರು ತರಕಾರಿ ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ತರಕಾರಿ ಬೀಜ ಉತ್ಪಾದನೆಗೆ ವಿಪುಲ ಅವಕಾಶ ಇದೆ. ಕೇಂದ್ರವು ತರಕಾರಿ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ರೈತರಿಗೆ ಪ್ರೇರಣೆ ನೀಡಲಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ಅವರು, ತರಕಾರಿ ಬೇಸಾಯದಲ್ಲಿ ಅಳವಡಿಸಿಕೊಳ್ಳಬಹುದಾದ ಮಲ್ಚಿಂಗ್, ಸೂಕ್ಷ್ಮಾಣು ಜೀವಿಗಳ ಬಳಕೆ, ಸಸಿ ಉತ್ಪಾದನೆ, ಲಘು ಪೋಷಕಾಂಶಗಳ ನಿರ್ವಹಣೆ ಕುರಿತು ಸಚಿತ್ರ ಮಾಹಿತಿ ನೀಡಿದರು.
ತೋಟಗಾರಿಕೆ ಕಾಲೇಜಿನ ಡಾ. ಅಶೋಕ ಸೂರ್ಯವಂಶಿ ಅವರು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಅಡ್ವೆಂಟಾ ಕಂಪನಿಯ ವಿಜ್ಞಾನಿ ಡಾ. ವಿಜಯಕುಮಾರ, ಯು.ಪಿ.ಎಲ್ ಕಂಪನಿಯ ಸಂಗಮೇಶ ಬಿರಾದಾರ, ಟಿ.ಆರ್.ಎ ಬಯೊಟೆಕ್ನ ಕೃಷ್ಣ ಇದ್ದರು. ಬೀದರ್, ಕಲಬುರ್ಗಿ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಮೈಸೂರು, ಮೂಡಿಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಯ ರೈತರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.