ಹುಮನಾಬಾದ್: ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಾಜಿ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ‘ರಾಸಾಯನಿಕ ಕಾರ್ಖಾನೆಗಳಿಂದ ಗಡವಂತಿ, ಮಾಣಿಕ್ ನಗರ, ಮೋಳಕೇರಾ, ಬಸಂತಪೂರ, ಧುಮ್ಮನಸೂರ ಮತ್ತು ಹುಮನಾಬಾದ್ ಪಟ್ಟಣದ ಜನರಿಗೆ ಮಾಲಿನ್ಯ ಸಮಸ್ಯೆ ಉಂಟಾಗುತ್ತಿದೆ. ಈ ಕಾರ್ಖಾನೆಗಳನ್ನು ಬಂದ್ ಮಾಡುವಂತೆ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಚೆಗೆ ಕೆಲವು ಕಾರ್ಖಾನೆ ಬಂದ್ ಆಗಿದ್ದವು. ಆದರೆ ವ್ಯವಸ್ಥಾಪಕರು ನ್ಯಾಯಾಲಯದ ಮೋರೆಹೋಗಿ ಮತ್ತೆ ಪ್ರಾರಂಭಿಸಿದ್ದಾರೆ’ ಎಂದು ತಿಳಿಸಿದರು.
‘ಈ ಕಾರ್ಖಾನೆಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರು ವಿಷಪೂರಿತ ಗಾಳಿಯಿಂದಾಗಿ ಅನೇಕ ಜನರು ಶ್ವಾಸಕೋಶ, ಹೃದಯ ಕಾಯಿಲೆಗೆ ಒಳಗಾಗಿದ್ದಾರೆ’ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ, ಜಿ.ಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ, ಲಕ್ಷ್ಮಣರಾವ್ ಬುಳ್ಳಾ, ಅಫ್ಸರ್ ಮಿಯಾ, ಓಂಕಾರ ತುಂಬಾ, ಉಮೇಶ ಜಮಗಿ, ಪ್ರಭುರಾವ್ ತಾಳಮಡಗಿ, ಸುರೇಶ್ ಘಾಂಗ್ರೆ, ಶಂಕರ್ ನಾಗ್ ಸಾಹುಕರ್, ಸಚ್ಚಿನ್ ಕಲ್ಲೂರ್, ಶಿವಕುಮಾರ್ ಬೇಳಕೇರಾ, ಅನೀಲ ಮಲ್ಕಾಪೂರ್ ವಾಡಿ ಸೇರಿದಂತೆ ಇತರರು ಇದ್ದರು.