ADVERTISEMENT

ಮುಂದುವರಿದ ಮುಷ್ಕರ; ಪ್ರಯಾಣಿಕರ ಪರದಾಟ

ಐದನೇ ದಿನಕ್ಕೆ ಕಾಲಿಟ್ಟ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪ್ರತಿಭಟನೆ; ಕೇವಲ ಬಸ್‌ ಮಾತ್ರ ಸಂಚಾರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 6:28 IST
Last Updated 12 ಏಪ್ರಿಲ್ 2021, 6:28 IST
ಸಾರಿಗೆ ನೌಕರರ ಮುಷ್ಕರದ ಕಾರಣ ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲೇ ನಿಂತ ಖಾಸಗಿ ಬಸ್‌ಗಳು
ಸಾರಿಗೆ ನೌಕರರ ಮುಷ್ಕರದ ಕಾರಣ ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲೇ ನಿಂತ ಖಾಸಗಿ ಬಸ್‌ಗಳು   

ಬೀದರ್‌: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರ ಭಾನುವಾರ ಐದನೇ ದಿನಕ್ಕೆ ಕಾಲಿರಿಸಿದೆ. ಅನೇಕ ಖಾಸಗಿ ಬಸ್‌ ಹಾಗೂ ಕ್ರೂಸರ್‌ಗಳು ಬಸ್‌ ನಿಲ್ದಾಣಗ ಳಲ್ಲಿ ನಿಲುಗಡೆ ಆಗುತ್ತಿದ್ದರೂ ಕೋವಿಡ್‌ ಕಾರಣ ಅವುಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಹಿಂಜರಿಯುತ್ತಿದ್ದಾರೆ.

ಏಸಿ, ಏಸಿ ಸ್ಲೀಪರ್‌ ಕೋಚ್‌ ಬಸ್‌ಗಳು ಪ್ರಯಾಣಿಕರನ್ನು ತುಂಬಿ ಕೊಂಡು ಹೈದ್ರಾಬಾದ್‌ ಹಾಗೂ ಕಲಬುರ್ಗಿಗೆ ಹೋಗಿ ಬರುತ್ತಿವೆ. ಆದರೆ ಕ್ರೂಸರ್‌ಗಳಲ್ಲಿ ಆಸನಕ್ಕಿಂತ ಹೆಚ್ಚಿನ ಜನರನ್ನು ಕೂರಿಸಲಾಗುತ್ತಿದೆ. ನಗರದ ವ್ಯಾಪ್ತಿಯಲ್ಲಿ ವಾಹನಗಳಲ್ಲಿ ಆಸನ ಇರುವಷ್ಟು ಜನರನ್ನು ಮಾತ್ರ ಸಾಗಿಸಲಾಗುತ್ತಿದೆ. ನಂತರ ಎಲ್ಲರನ್ನೂ ಒತ್ತೊತ್ತಾಗಿ ಕೂರಿಸಿ ಹೆಚ್ಚಿನ ಜನರನ್ನು ಒಯ್ಯುತ್ತಿರುವ ಕಾರಣ ಕೋವಿಡ್‌ ವ್ಯಾಪ ಕವಾಗಿ ಹರಡುವ ಭೀತಿ ಎದುರಾಗಿದೆ.

ಭಾನುವಾರ ಸಹ ಬೀದರ್, ಉದಗಿರ, ಜಹೀರಾಬಾದ್ ಹಾಗೂ ಹೈದ್ರಾಬಾದ್‌ ಮಧ್ಯೆ ತೆಲಂಗಾಣದ ಸಾರಿಗೆ ಬಸ್‌ಗಳೇ ಅಧಿಕ ಸಂಖ್ಯೆಯಲ್ಲಿ ಸಂಚರಿಸಿದವು. ಮಹಾರಾಷ್ಟ್ರ ಸಾರಿಗೆ ಬಸ್‌ಗಳು ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೆ ಬಂದು ಹೋಗಿವೆ.
ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಮಿರಜ್‌ಗೆ ಹೋಗುವ ಪ್ರಯಾಣಿಕರು ನಾಲ್ಕು ದಿನಗಳಿಂದ ಪರದಾಡುತ್ತಿದ್ದಾರೆ. ಈ ಊರುಗಳಿಗೆ ನೇರವಾಗಿ ಹೊರಡುವ ಬಸ್‌ಗಳ ಸೇವೆ ಇನ್ನೂ ಆರಂಭವಾಗಿಲ್ಲ. ಖಾಸಗಿ ಬಸ್‌ಗಳು ನೆರೆಯ ಜಿಲ್ಲೆಗಳಿಗೆ ಮಾತ್ರ ಹೋಗಿ ಬರುತ್ತಿವೆ.

ADVERTISEMENT

‘ಭಾನುವಾರ 60 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. 30 ಬಸ್‌ಗಳ ಸಂಚಾರ ಆರಂಭವಾಗಿದೆ. ಸಿಬ್ಬಂದಿ ನಿಧಾನವಾಗಿ ಕೆಲಸಕ್ಕೆ ಹಾಜರಾಗಲು ಬರುತ್ತಿದ್ದಾರೆ’ ಎಂದು ಎನ್‌ಇಕೆಆರ್‌ಟಿಸಿ ಬೀದರ್‌ ವಿಭಾಗೀಯ ಸಂಚಾಲಕ ಚಂದ್ರಕಾಂತ ಫುಲೇಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.