ADVERTISEMENT

ಕಮಲನಗರ: ಆರೋಗ್ಯ ತಪಾಸಣೆಗೆ ಸಿದ್ಧತೆ

14 ದಿನಗಳ ಕ್ವಾರಂಟೈನ್‌ಗೆ ಉಪವಿಭಾಗಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:21 IST
Last Updated 9 ಮೇ 2020, 9:21 IST
ಕಮಲನಗರದ ಚೆಕ್‌ಪೋಸ್ಟ್‌ಗೆ ಶುಕ್ರವಾರ ಸಂಜೆ ಬೀದರ್‌ ಉಪವಿಭಾಗಾಧಿಕಾರಿ ಅಕ್ಷಯ ಶ್ರೀಧರ ಭೇಟಿ ನೀಡಿದರು
ಕಮಲನಗರದ ಚೆಕ್‌ಪೋಸ್ಟ್‌ಗೆ ಶುಕ್ರವಾರ ಸಂಜೆ ಬೀದರ್‌ ಉಪವಿಭಾಗಾಧಿಕಾರಿ ಅಕ್ಷಯ ಶ್ರೀಧರ ಭೇಟಿ ನೀಡಿದರು   

ಕಮಲನಗರ:ಲಾಕ್‍ಡೌನ್‍ನಿಂದ ಮಹಾರಾಷ್ಟ್ರ ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿದ್ದ ತಾಲ್ಲೂಕಿನ ವಿವಿಧ ಗ್ರಾಮಗಳ ಕಾರ್ಮಿಕರು ಶನಿವಾರ ಬೆಳಗ್ಗಿನಿಂದಲೇ ಕಮಲನಗರ ಶಾಂತಿವರ್ಧಕ ಕಾಲೇಜಿನ ಆವರಣಕ್ಕೆ ಬರಲಿದ್ದಾರೆ.

ಅವರನ್ನು ಫಿವರ್ ಕ್ಲಿನಿಕ್‍ನಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುವುದು ಎಂದು ಬೀದರ್‌ ಉಪವಿಭಾಗಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದರು.

ಈ ವೇಳೆ ಮಾತನಾಡಿದ ಅವರು,‘ಶನಿವಾರ ಬೆಳಿಗಿನಿಂದ ಹೊರರಾಜ್ಯ ಮಹಾರಾಷ್ಟ್ರದ ಮುಂಬೈ, ಪುಣೆ, ಲಾತೂರ್‌, ಪರಬಣಿ, ಸೊಲ್ಲಾಪುರ, ನಾಂದೇಡ, ಔರಂಗಬಾದ್, ಉದಗೀರ, ಪರಳಿ ಮತ್ತಿತರ ಕಡೆಯಿಂದ ಅಲ್ಲಿನ ಜಿಲ್ಲಾಧಿಕಾರಿ ಅವರ ಪರವಾನಿಗಿ ಪತ್ರ ಪಡೆದ ಹತ್ತಾರು ಬಸ್‍ಗಳು ಬರಲಿವೆ. ಪ್ರತಿ ಬಸ್‍ನಲ್ಲಿ 35 ಜನ ಇರುವರು.

ADVERTISEMENT

ಕೊರೊನಾ ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ, 14 ದಿನ ಕ್ವಾರಂಟೈನ್‌ಗೆ ಆದೇಶ ನೀಡಲಾಗುವುದು. ಪ್ರಯಾಣಿಕರ ಸಂಪೂರ್ಣ ಮಾಹಿತಿ ಪಡೆದು ಅವರ ಆರೋಗ್ಯದ ಬಗ್ಗೆ ಆಯಾಯ ಗ್ರಾಮಗಳಲ್ಲಿನ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಮೂಲಕ ನಿಗಾ ವಹಿಸಲಾಗುವುದು ಎಂದರು.

ಹೊರ ರಾಜ್ಯದಿಂದ 3,000ಕ್ಕೂ ಅಧಿಕ ಕಾರ್ಮಿಕರು ಬರುವ ನಿರೀಕ್ಷೆ ಇದೆ. ಅವರನ್ನು ಚೆಕ್‍ಪೋಸ್ಟ್‌ನಿಂದ ತಪಾಸಣೆ ಶಿಬಿರಕ್ಕೆ ಕಳುಹಿಸಬೇಕು. ಕೊರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ರೂಪಿಸಿದ ನಿಯಮಗಳನ್ನು ಪಾಲಿಸದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಡಿಎಚ್‍ಒ ಡಾ.ವಿ.ಜಿ.ರೆಡ್ಡಿ, ಡಾ.ಸಂತೋಷ ಕಾಳೆ, ಅಶ್ವಿನ್‌ ಪಾಟೀಲ, ಸಿಪಿಐ ಪಾಲಕ್ಷಯ್ಯ ಹಿರೇಮಠ, ತಹಶೀಲ್ದಾರ್ ರಮೇಶ ಪೇದ್ದೆ, ಗೋಪಾಲಕೃಷ್ಣ, ಮಲ್ಲಿಕಾರ್ಜುನ ಬಿರಾದಾರ, ಮಹೇಶ ಕಳಸೆ, ರಾಜಕುಮಾರ ಚಿಕ್ಲಿ, ಮಹಾದೇವ ಹಾಗೂ ವಿಶ್ವನಾಥ ಪವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.