ADVERTISEMENT

₹ 1ರಲ್ಲೇ ಕೋವಿಡ್‍ ಸೋಂಕಿತರಿಗೆ ಚಿಕಿತ್ಸೆ

ಕೋವಿಡ್ ಕೇರ್ ಸೆಂಟರ್ ಆರಂಭಿಸಿದ ಜಿ.ಎನ್.ಆಸ್ಪತ್ರೆ, ಕೆ.ಕೆ. ಸಂವರ್ಧನ ಸಮಿತಿ

ನಾಗೇಶ ಪ್ರಭಾ
Published 8 ಮೇ 2021, 5:15 IST
Last Updated 8 ಮೇ 2021, 5:15 IST
ಬೀದರ್‌ನ ವಂದೇ ಮಾತರಂ ಸ್ಕೂಲ್‍ನ ಕೋವಿಡ್ ಕೇರ್ ಸೆಂಟರ್ ಕುರಿತು ಜಿ.ಎನ್.ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಅವರಿಗೆ ಮಾಹಿತಿ ನೀಡಿದರು
ಬೀದರ್‌ನ ವಂದೇ ಮಾತರಂ ಸ್ಕೂಲ್‍ನ ಕೋವಿಡ್ ಕೇರ್ ಸೆಂಟರ್ ಕುರಿತು ಜಿ.ಎನ್.ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಅವರಿಗೆ ಮಾಹಿತಿ ನೀಡಿದರು   

ಬೀದರ್: ಇಲ್ಲಿಯ ಟೀಚರ್ಸ್ ಕಾಲೊನಿಯ ವಂದೇ ಮಾತರಂ ಸ್ಕೂಲ್‍ನಲ್ಲಿ ನೂತನವಾಗಿ ಆರಂಭಿಸಲಾದ ಕೋವಿಡ್ ಕೇರ್ ಸೇಂಟರ್‌ನಲ್ಲಿ ಕೋವಿಡ್ ಸೋಂಕಿತರಿಗೆ ₹1 ರಲ್ಲೇ ಚಿಕಿತ್ಸೆ ದೊರೆಯಲಿದೆ.

ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಿತ ಕೇಶವ ಕಾರ್ಯ ಸಂವರ್ಧನ ಸಮಿತಿ ವತಿಯಿಂದ ಸರಸ್ವತಿ ವಿದ್ಯಾನಿಕೇತನ ಎಜುಕೇಶನ್ ಟ್ರಸ್ಟ್ ಸಹಕಾರದೊಂದಿಗೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.

ಈ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವವರಿಗೆ ಬೆಳಿಗ್ಗೆ ಕಷಾಯ, ಉಪಾಹಾರ, ಮಧ್ಯಾಹ್ನ ಊಟ, ಸಂಜೆ 4ಕ್ಕೆ ಲಘು ಉಪಾಹಾರ ಹಾಗೂ ರಾತ್ರಿ 8ಕ್ಕೆ ಊಟ ಉಚಿತವಾಗಿ ಲಭಿಸಲಿದೆ. ಬಿಸಿ ಹಾಗೂ ತಣ್ಣೀರು ವ್ಯವಸ್ಥೆಯೂಇದೆ.

ADVERTISEMENT

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೆರವಾಗಲು ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ. ಇಲ್ಲಿ ಒಟ್ಟು 50 ಹಾಸಿಗೆಗಳು ಇದ್ದು, ಇದರಲ್ಲಿ 6 ಆಮ್ಲಜನಕ ಹಾಸಿಗೆಗಳು ಇವೆ ಎಂದು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದರು.

4 ಜನ ತಜ್ಞ ವೈದ್ಯರು, ಕೋವಿಡ್ ಸೋಂಕು ವಿಶೇಷ ತಜ್ಞರು ಹಾಗೂ ನರ್ಸ್‍ಗಳು ಚಿಕಿತ್ಸೆ ನೀಡಲಿದ್ದಾರೆ. ನಿತ್ಯ ಯೋಗ, ಪ್ರಾಣಾಯಾಮ ಅಭ್ಯಾಸ ಇರಲಿದೆ. ರಾಷ್ಟ್ರೀಯ ಸಾಹಿತ್ಯ ಅಧ್ಯಯನಕ್ಕಾಗಿ ದೊರಕಲಿದೆ. ದಿನದ 24 ಗಂಟೆ ಆಂಬುಲೆನ್ಸ್ ಸೇವೆಯೂ ಇರಲಿದೆ ಎಂದು ಹೇಳಿದರು.

₹ 1 ರಲ್ಲೇ ಸೋಂಕಿತರಿಗೆ ಚಿಕಿತ್ಸೆ, ಊಟ ಹಾಗೂ ವೈದ್ಯಕೀಯ ಉಪಚಾರ ಸಿಗಲಿದೆ. ಕೇಂದ್ರಕ್ಕೆ ದಾಖಲಾದ ತೀವ್ರ ತರಹದ ಸಮಸ್ಯೆ ಇರುವ ಸೋಂಕಿತರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಭರವಸೆ ನೀಡಿದ್ದಾರೆ. ವಾಲಿಶ್ರೀ ಆಸ್ಪತ್ರೆಯವರು ಕೂಡ ಇಲ್ಲಿಂದ ಕಳುಹಿಸಲಾಗುವ ರೋಗಿಗಳಿಗೆ ನೆರವಾಗುವ ಆಶ್ವಾಸನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕೋವಿಡ್ ಮೊದಲ ಅಲೆ ವೇಳೆ ಆರ್‌ಎಸ್‍ಎಸ್ ಸಹಕಾರದೊಂದಿಗೆ 35 ಸಾವಿರ ಕುಟುಂಬಗಳಿಗೆ ಆಹಾರಧಾನ್ಯ ಕಿಟ್, 1.15 ಲಕ್ಷ ಮಾಸ್ಕ್‌ಗಳನ್ನು ಉಚಿತವಾಗಿ ಹಂಚಲಾಗಿತ್ತು. ಆಶಾ ಕಾರ್ಯಕರ್ತೆಯರಿಗೆ ಉಚಿತ ಸೀರೆ ವಿತರಿಸಲಾಗಿತ್ತು. ಜಿ.ಎನ್. ಆಸ್ಪತ್ರೆ ವತಿಯಿಂದ ಜಿಂದಗಿ ಕೆ ಸಾಥ್ ಭಿ, ಜಿಂದಗಿ ಕೆ ಬಾದ್ ಭಿ ಘೋಷವಾಕ್ಯದಡಿ ಆಂಬುಲೆನ್ಸ್ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಕೋವಿಡ್ ಸೋಂಕಿತರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನೆರವೇರಿಸಲಾಗಿತ್ತು ಎಂದುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.