ಚಿಟಗುಪ್ಪ: ಪಟ್ಟಣಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಎನ್.ಎಚ್.ಎಂ ಯೋಜನೆ ಅಡಿಯಲ್ಲಿ ₹66.72 ಕೋಟಿ ಮಂಜೂರು ಮಾಡಿದೆ. ನಿವೇಶನ ಗುರುತಿಸುವ ಕಾರ್ಯ ನಡೆಯುತ್ತಿದೆ’ ಎಂದು ಶಾಸಕ ರಾಜಶೇಖರ್ ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರ ಜಿಲ್ಲೆಯ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಅನುದಾನ ಬಿಡುಗಡೆ ಮಾಡಿ ತಕ್ಷಣ ಕಬ್ಬು ಅರೆಯುವ ಕಾರ್ಯ ಆರಂಭಿಸಿ ರೈತರಿಗೆ ನೆರವಾಗಬೇಕು’ ಎಂದು ಆಗ್ರಹಿಸಿದರು.
‘ಹುಮನಾಬಾದ್, ಚಿಟಗುಪ್ಪ ಎರಡು ಕಡೆ ಧ್ವಜಾರೋಹಣ ಮಾಡುವ ಒತ್ತಡ ನನ್ನ ಮೇಲಿರುವುದರಿಂದ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪುರ ಚಿಟಗುಪ್ಪದಲ್ಲಿ ಧ್ವಜಾರೋಹಣ ನೆರವೇರಿಸಲು ಬರಬೇಕು’ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬೀರಪ್ಪ ಮಾರ್ತಂಡ್, ಉಪಾಧ್ಯಕ್ಷೆ ನಿರ್ಮಲಾ ಸ್ವಾಮಿ, ಪುರಸಭೆ ಉಪಾಧ್ಯಕ್ಷೆ ಸೌಭಾಗ್ಯವತಿ ಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾರತಬಾಯಿ, ಹುಮನಾಬಾದ್ ತಹಶೀಲ್ದಾರ ನಾಗಯ್ಯ ಸ್ವಾಮಿ ಹಿರೇಮಠ, ಮುಖ್ಯಾಧಿಕಾರಿ ಶ್ರೀಪಾದ್ ರಾಜಪುರೋಹಿತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ಕನಕ, ಡಿವೈಎಸ್ಪಿ ಸೋಮಲಿಂಗ್ ಕುಂಬಾರ, ವೃತ್ತ ನಿರೀಕ್ಷಕ ಅನಮೋಲ್ ಕಾಳೆ, ಪುರಸಭೆ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.
ತಹಶೀಲ್ದಾರ್ ಜಿಯಾವುಲ್ಲ ಧ್ವಜಾರೋಹಣ ನೆರವೇರಿಸಿದರು. ಅಶೋಕ ಚನ್ನಕೊಟೆ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.