ಬೀದರ್: ‘ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ಒತ್ತಡದಲ್ಲಿದ್ದಾರೆ. ನಾವು ಎಷ್ಟೇ ಒತ್ತಡದಲ್ಲಿದ್ದರೂ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಸಂಸ್ಕೃತಿಯನ್ನು ಪೋಷಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಹೊಣೆಯಾಗಿದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪುಂಡಲೀಕರಾವ್ ಹೇಳಿದರು.
ಮುಂದಾರ ಕಲಾವಿದರ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿದ್ಯಾನಗರ ಕಾಲೊನಿಯ ಸಮತಾ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕವಿಗೋಷ್ಠಿ, ಗೌರವ ಸನ್ಮಾನ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಮಕ್ಕಳೇ ಸಂಸ್ಕೃತಿಯ ವಾಹಕರು. ಹೀಗಾಗಿ ಮಾತೆಯರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು’ ಎಂದು ಹೇಳಿದರು.
ಯುವ ಸಾಹಿತಿ ನಾಗೇಶ ಸ್ವಾಮಿ ಮಾತನಾಡಿದರು. ಸಾಹಿತಿ ಈಶ್ವರಯ್ಯ ಕೊಡಂಬಲ, ಮುಖ್ಯಶಿಕ್ಷಕ ಬಳಿರಾಮ್ ಅತಿಥಿಗಳಾಗಿದ್ದರು.
ಕವಯಿತ್ರಿ ಶ್ರೇಯಾ ಮಹೀಂದ್ರಕರ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಅಶೋಕ ಬೂದಿಹಾಳ, ಕವಿ ಶ್ರೀಕಾಂತ ಪಾಟೀಲ, ಶಾಂತಕುಮಾರ ಸ್ವಾಮಿ, ವೀರಭದ್ರಪ್ಪ ಉಪ್ಪಿನ್, ನಾರಾಯಣರಾವ್ ಕಾಂಬಳೆ ಹಾಗೂ ಅಜಿತ್ ಎನ್. ಇದ್ದರು.
ಸಾಹಿತಿ ಎಂ.ಜಿ.ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಮಲಿಂಗ ಬುಡ್ಡನವರ ನಾಡಗೀತೆ ಹಾಡಿದರು. ಆರ್.ಎಸ್.ಬಿರಾದಾರ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಧನರಾಜ್ ಅಣಕಲ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.