ADVERTISEMENT

ಭ್ರೂಣ ಹತ್ಯೆ ತಡೆಗೆ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಮಹಾದೇವ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 9:47 IST
Last Updated 19 ಡಿಸೆಂಬರ್ 2019, 9:47 IST

ಬೀದರ್‌: ‘ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾನೂನು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಇದರ ಜತೆಗೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೋಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಕಾಯಕಲ್ಪ ಹಾಗೂ ಪಿ.ಸಿ.ಪಿ.ಎನ್.ಡಿ.ಟಿ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಭ್ರೂಣ ಹತ್ಯೆ ತಡೆಯಲು ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯಬೇಕು. ಭ್ರೂಣ ಲಿಂಗ ಪತ್ತೆಗೆ ಒತ್ತಾಯ ಮಾಡುವಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಕ್ರಮ ಜರುಗಿಸಬೇಕು. ಜಿಲ್ಲೆಯಲ್ಲಿ ಗರ್ಭನಿರೋಧಕ ಮಾತ್ರೆಗಳ ದುರ್ಬಳಕೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಮೆಡಿಕಲ್ ಶಾಪ್‌ಗಳ ಮಾಲೀಕರು ಹಾಗೂ ಏಜೆನ್ಸಿಗಳ ಸಭೆ ಕರೆದು ತಾಕೀತು ಮಾಡಬೇಕು; ಎಂದು ನಿರ್ದೇಶನ ನೀಡಿದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ ರೆಡ್ಡಿ ಮಾತನಾಡಿ,‘ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿರುವುದು ಚಿಂತಾಜನಕದ ವಿಷಯವಾಗಿದೆ. ಲಿಂಗ ಸಮತೋಲನ ಕಾಪಾಡಲು ವೈದ್ಯರು ಹಾಗೂ ಸಾರ್ವಜನಿಕರು ಪಿ.ಸಿ.ಪಿ.ಎನ್.ಡಿ.ಟಿ ಕಾನೂನಿನ ಸಮರ್ಪಕ ಅನುಷ್ಠಾನಕ್ಕೆ ಸಹಕರಿಸಬೇಕು’ ಎಂದು ತಿಳಿಸಿದರು.

ಡಾ.ಇಂದುಮತಿ ಪಾಟೀಲ ಮಾತನಾಡಿ, ‘ಇಲಾಖೆಯಿಂದ ನಡೆಯುವ ಪ್ರತಿಯೊಂದು ಗರ್ಭಪಾತದ ಬಗ್ಗೆ ವರದಿ ತಯಾರಿಸಲಾಗುತ್ತಿದೆ.ಇದಕ್ಕೆ ಕುಟುಂಬಸ್ಥರು ಸಹಕಾರ ಅಗತ್ಯ’ ಎಂದರು.

ಬಿಒಜಿಎಸ್ ಅಧ್ಯಕ್ಷೆ ಡಾ.ವಿಜಯಶ್ರೀ ಬಶೆಟ್ಟಿ ಮಾತನಾಡಿ, ‘ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಗರ್ಭಿಣಿಯರ ಮೇಲೆ ನಿಗಾ ವಹಿಸಬೇಕು’ ಎಂದು ಸಲಹೆ ನೀಡಿದರು.

ಬ್ರಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಮಾ ದೇಶಮುಖ ಮಾತನಾಡಿ, ‘ಹೆಣ್ಣು ಮಕ್ಕಳು ಬೇಡ ಎಂಬ ಕಾರಣಕ್ಕಾಗಿ ಪ್ರಸವ ಪೂರ್ವದಲ್ಲೇ ಮಕ್ಕಳನ್ನು ಹತ್ಯೆ ಮಾಡುವುದು ಮಹಾಪರಾಧ. ಕಾಯ್ದೆ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ಡಾ.ಕೃಷ್ಣಾ ರೆಡ್ಡಿ, ಡಾ.ರಾಜಶೇಖರ ಪಾಟೀಲ, ಡಾ.ಅನಿಲ ಚಿಂತಾಮಣಿ, ಡಾ.ರವೀಂದ್ರ ಸಿರ್ಸೆ, ಡಾ.ಶಿವಶಂಕರ, ಡಾ.ದೀಪಾ ಖಂಡ್ರೆ, ಡಾ.ಶರಣಯ್ಯ ಸ್ವಾಮಿ, ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳ ಮಾಲೀಕರು ಹಾಗೂ ಸರ್ಕಾರಿ ವೈದ್ಯರು ಉಪಸ್ಥಿತರಿದ್ದರು.

ಡಾ.ಲಕ್ಷ್ಮೀಕಾಂತ ವಲ್ಲೆಪೂರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.