ಭಾಲ್ಕಿ: ‘ನಮ್ಮ ಕುಟುಂಬದ ಸಮೃದ್ಧ ಮತ್ತು ಕಷ್ಟಗಳೆರಡಕ್ಕೂ ನಾವೇ ಕಾರಣರು. ಉತ್ತಮರ ಸಂಘ ಮತ್ತು ವ್ಯಸನಮುಕ್ತ ಜೀವನದಿಂದ ಸಮೃದ್ಧ ಬದುಕು ನಡೆಸಲು ಸಾಧ್ಯ’ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಪಟದಲ್ಲಿ ಶುಕ್ರವಾರ ನಡೆದ 1995ನೇ ಮಧ್ಯವರ್ಜನ ಶಿಬಿರದ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ‘ವ್ಯಸನ ಮುಕ್ತ ಜೀವನ ನಡೆಸಲು ಸಹಕರಿಸುವಂತಹ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಾರ್ಯ, ದೇವರು ಮೆಚ್ಚುವಂತದ್ದಾಗಿದೆ’ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಜಿಲ್ಲಾ ನಿರ್ದೇಶಕ ಮುರಳೀಧರ ಎಚ್.ಎಲ್. ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅದರ ಅಂಗ ಸಂಸ್ಥೆಗಳಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲೈಲಾ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಸೇರಿದಂತೆ ವಿವಿಧ ಸಂಘಗಳು ಕೈ ಜೋಡಿಸಿ, ಮಧ್ಯವರ್ಜನ ಶಿಬಿರ ಆಯೋಜಿಸಿವೆ. ಸುಮಾರು 8 ದಿನಗಳವರೆಗೆ ನಡೆಸಿರುವ ಈ ಮಧ್ಯವರ್ಜನ ಶಿಬಿರ ತುಂಬಾ ಯಶಸ್ವಿಯಾಗಿದೆ. ಇಲ್ಲಿ ಸೇರಿರುವ ಸುಮಾರು 65 ಶಿಬಿರಾರ್ಥಿಗಳು ವ್ಯಸನಮುಕ್ತರಾಗಿ ತಮ್ಮ ಮುಂದಿನ ಜೀವನ ಉತ್ತಮ ರೀತಿಯಿಂದ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಸಂತೋಷ ಟಿ.ಎನ್. ಪ್ರಾಸ್ತಾವಿಕ ಮಾತನಾಡಿದರು.
ಮುಖಂಡರಾದ ಅಮರ ಹಲಮಂಡಗೆ, ಜಯರಾಜ ದಾಬಶೆಟ್ಟಿ, ಶಿವು ಲೋಖಂಡೆ, ಸಂತೋಷ ಬಿಜಿಪಾಟೀಲ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಭಾಷ ಹುಲಸೂರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಶಿಬಿರಾರ್ಥಿಗಳಿಗೆ, ನವಜೀವನ ಸಾಗಿಸಲು ಪುನರ್ವಿವಾಹ ಮಾಡಲಾಯಿತು. ಶ್ರೀಗಳಿಂದ ತೀರ್ಥಾರ್ಪಣ ಮಾಡಿ ಆಶೀರ್ವದಿಸಲಾಯಿತು. ಪ್ರಮುಖರಾದ ಬಸವರಾಜ ವಂಕೆ, ಸೋಮನಾಥಪ್ಪ, ಸುರೇಶ ಕನಶೆಟ್ಟಿ, ವಿಜಯಕುಮಾರ ರಾಜಭವನ, ಶಿವರಾಜ ಮಲ್ಲೇಶಿ, ತಿಪ್ಪಣ್ಣ ಶಿವಪೂರೆ, ಶಿವಾನಂದ ಲಕಾಟಿ, ರಾಜೇಶ, ರೇಷ್ಮಾ ತಮಾಸಂಗೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ದೇಹವೆಂಬ ದೇಗುಲದಲ್ಲಿ ದೇವರನ್ನು ಕಾಣಬೇಕಾದರೆ ಯಾರೊಬ್ಬರೂ ವ್ಯಸನಗಳ ದಾಸರಾಗದೇ ಉತ್ತಮ ಜೀವನ ಸಾಗಿಸಬೇಕುಗುರುಬಸವ ಪಟ್ಟದ್ದೇವರು ಪೀಠಾಧಿಪತಿ ಹಿರೇಮಠ ಸಂಸ್ಥಾನ ಭಾಲ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.