ADVERTISEMENT

ನರೇಗಾ ಕಾರ್ಮಿಕನಿಗೆ ಪರಿಹಾರ ಘೋಷಣೆ

ಕೂಲಿಕೆಲಸ ಮಾಡುತ್ತಿದ್ದಾಗ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 5 ಮೇ 2021, 5:20 IST
Last Updated 5 ಮೇ 2021, 5:20 IST
ರಾಮರೆಡ್ಡಿ
ರಾಮರೆಡ್ಡಿ   

ಹುಲಸೂರ: ತಾಲ್ಲೂಕಿನ ತೊಗಲೂರ ಗ್ರಾಮದ ವ್ಯಕ್ತಿಯೊಬ್ಬರು ಮಂಗಳವಾರ ನರೇಗಾ ಕೂಲಿಕೆಲಸ ಮಾಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮೃತನ ಕುಟುಂಬಕ್ಕೆ ₹75 ಸಾವಿರ ಪರಿಹಾರ ಧನ ಘೋಷಿಸಲಾಗಿದೆ.

ರಾಮರಡ್ಡಿ ಎಚ್. (58) ಮೃತರು.

‘ತೊಗಲೂರ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಮರಡ್ಡಿ ಸೇರಿದಂತೆ ಸುಮಾರು 20 ಜನ ಕಾರ್ಮಿಕರು ಗ್ರಾಮದ ವಿಶ್ವನಾಥ ಬಿ. ಶೇರಿಕಾರ ಅವರ ಹೊಲದಲ್ಲಿ ಬದು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು. ಇದ್ದಕ್ಕಿದಂತೆ ರಾಮರಡ್ಡಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಆತನ ಸಹ ಕೂಲಿಕಾರರು ಸಹಾಯಕ್ಕೆ ಧಾವಿಸಿದರು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಒಯ್ಯುತ್ತಿರುವಾಗ ರಾಮರಡ್ಡಿ ಮೃತಪಟ್ಟಿದ್ದಾರೆ. ಹುಲಸೂರನಿಂದ ಅವರ ಮೃತದೇಹವನ್ನು ತೊಗಲೂರಗೆ ಕೊಂಡೊಯ್ಯಲಾಯಿತು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬು ನಿಲಂಗೆ ಮಾಹಿತಿ ನೀಡಿದರು.

ADVERTISEMENT

ರಾಮರಡ್ಡಿ ಅವರ ಮನೆಗೆ ಭೇಟಿ ನೀಡಿದ ಹುಲಸೂರ ತಾ.ಪಂ ಇಒ ಸಂತೋಷ ತಾಂಡೂರ ಅವರು ನರೇಗಾ ನಿಯಮಾವಳಿಯಂತೆ ಮೃತರ ಕುಟುಂಬಕ್ಕೆ ₹75 ಸಾವಿರ ಪರಿಹಾರ ಧನ ನೀಡಲಾಗುವುದು ಎಂದು ಹೇಳಿದರು.

ನರೇಗಾ ಸಹಾಯಕ ನಿರ್ದೇಶಕ ಜಯಪ್ರಕಾಶ ಚವ್ಹಾಣ ಮಾತನಾಡಿ, ‘ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಸುರಕ್ಷಾ ವಿಮೆ ಯೋಜನೆಯಲ್ಲಿ ಎಲ್ಲಾ ನರೇಗಾ ಕೂಲಿಕಾರರು ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸಾವು ಸಂಭವಿಸಿದಾಗ ಮೃತರ ಬಡ ಕುಟುಂಬಕ್ಕೆ ಈ ವಿಮೆ ಹಣ ತುಂಬಾ ಸಹಕಾರಿಯಾಗುತ್ತದೆ’ ಎಂದು ಸಲಹೆ ನೀಡಿದರು.

ರಾಮರಡ್ಡಿ ಅವರ ಅಂತ್ಯಸಂಸ್ಕಾರಕ್ಕಾಗಿ ಪಿಡಿಒ ಬಾಬು ನಿಲಂಗೆ ಅವರು ₹15,000 ನೀಡಲಾಗುತ್ತದೆ ಎಂದರು.

ತಾಲ್ಲೂಕು ಐಇಸಿ ಸಂಯೋಜಕ ಗಣಪತಿ ಹರಕುಡೆ, ರಮೇಶ ಧಬಾಲೆ, ಶ್ರೀನಿವಾಸ ರಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.