ಖಟಕಚಿಂಚೋಳಿ: ಭಾಲ್ಕಿ-ಹುಮನಾಬಾದ್ ಮುಖ್ಯರಸ್ತೆಯಿಂದ ಒಂದು ಕಿ.ಮೀ.ಅಂತರದಲ್ಲಿರುವ ಖಟಕಚಿಂಚೋಳಿ ಗ್ರಾಮಕ್ಕೆ ಬಸ್ ಬಾರದಿರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.
ಲಾಕ್ಡೌನ್ ಮುಗಿದು ಹದಿನೈದು ದಿನಗಳು ಕಳೆದಿವೆ. ಎಲ್ಲೆಡೆ ಬಸ್ ಸಂಚಾರ ಪ್ರಾರಂಭವಾಗಿವೆ. ಮೊದಲು ಭಾಲ್ಕಿಯಿಂದ ಹುಮನಾಬಾದ್ಗೆ ಹೋಗುವ ಎಲ್ಲಾ ಬಸ್ಗಳು ಗ್ರಾಮಕ್ಕೆ ಬಂದು ಹೋಗುತ್ತಿದ್ದವು. ಆದರೆ ಸದ್ಯ ಮುಖ್ಯ ರಸ್ತೆಯಿಂದ ಹೋಗುತ್ತಿವೆ. ಹೀಗಾಗಿ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಎಲ್ಲ ಬಸ್ಗಳು ಗ್ರಾಮಕ್ಕೆ ಬರಬೇಕು ಎಂದು ಎಬಿವಿಪಿಯ ರೇವಣಸಿದ್ದ ಜಾಡರ್ ಆಗ್ರಹಿಸುತ್ತಾರೆ.
ಖಟಕಚಿಂಚೋಳಿ ಹೋಬಳಿ ಯಾಗಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ದಿನಸಿ ವಸ್ತುಗಳು, ಆಸ್ಪತ್ರೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಗ್ರಾಮಕ್ಕೆ ಬರುತ್ತಾರೆ. ಆದರೆ ಸದ್ಯ ಬಸ್ ಸೌಲಭ್ಯ ಇಲ್ಲದಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮದ ನಾಗರಾಜ ಶೀಲವಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮಾರು 15 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಪ್ರತಿದಿನ ಸಾವಿರಾರು ಜನರು ಕೆಲಸದ ಪ್ರಯುಕ್ತ ಭಾಲ್ಕಿ ಹಾಗೂ ಹುಮನಾಬಾದ್ ಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯವಿದೆ. ಅಲ್ಲದೇ ಸದ್ಯ ಕಾಲೇಜು ಹುಡುಗ ಹುಡುಗಿಯರು ಕಾಲೇಜಿಗೆ ಹೋಗುತ್ತಿದ್ದಾರೆ. ಅವರಿಗೂ ಅನಾನುಕೂಲವಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕುತ್ತಿದ್ದಾರೆ.
‘ಇದೇ ಜುಲೈ 19 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿವೆ. ಖಟಕಚಿಂಚೋಳಿ ಹೋಬಳಿ ಕೇಂದ್ರವಾಗಿರುವುದರಿಂದ ಸುತ್ತಮುತ್ತಲಿನ ಹಳ್ಳಿಗಳ ಪ್ರೌಢಶಾಲೆ ಮಕ್ಕಳ ಪರೀಕ್ಷಾ ಕೇಂದ್ರವು ಇದೇ ಗ್ರಾಮದಲ್ಲಿ ಇದೆ. ಒಂದು ವೇಳೆ ಬಸ್ ಇಲ್ಲದಿದ್ದರೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಹಾಜರಾಗುವುದು ಕಷ್ಟವಾಗುವುದು. ಹೀಗಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಗುರು ಒತ್ತಾಯಿಸಿದ್ದಾರೆ.
‘ಈಗಾಗಲೇ ಭಾಲ್ಕಿಯ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಬಸ್ ಬರದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.