ಬೀದರ್: ‘ನಗರಲ್ಲಿ ಸುಮಾರು 4-5 ದಿವಸಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಪರಿಣಾಮ ರಸ್ತೆಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ. ಹಾಳಾದ ರಸ್ತೆಗಳನ್ನುದುರುಸ್ತಿ ಮಾಡಬೇಕು’ ಎಂದು ಆಗ್ರಹಿಸಿ ಗುರುವಾರ ಕರ್ನಾಟಕ ರಕ್ಷಾಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಸಂಘಟನೆಯ ಜಿಲ್ಲಾಧ್ಯಕ್ಷ ಪಿಟರ್ ಚಿಟಗುಪ್ಪಾ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ‘ಮಳೆ ನೀರು ರಸ್ತೆಯ ತಗ್ಗುಗಳಲ್ಲಿ ನಿಲ್ಲುವುದರಿಂದ ವಾಹನ ಚಾಲಕರಿಗೆ ವಾಹನ ಚಾಲಕರಿಗೆ, ಪಾದಚಾರಿಗಳಿಗೆ ರಸ್ತೆ ಯಾವುದು, ತಗ್ಗು ಯಾವುದೇ ಎನ್ನುವುದೇ ಗೊತ್ತಾಗುವುದಿಲ್ಲ. ಇದರಿಂದ ದೊಡ್ಡ ಅಪಾಯಳೇ ಆಗುವ ಸಾಧ್ಯತೆ ಇದೆ. ಅಂಬೇಡ್ಕರ್ ಕಾಲೊನಿ ಹತ್ತಿರ, ಶಾಸಕ ರಹೀಂ ಖಾನ್ ಫಾರ್ಮ ಹೌಸ್, ಬೀದರ್ ನಗರದಿಂದ ಸುಮಾರು 7 ಕಿ.ಮೀ ಅಂತದದಲ್ಲಿರುವ ಕಮಠಾಣಾ ಗ್ರಾಮಕ್ಕೆ ಹೋಗುವ ರಸ್ತೆ ಮಧ್ಯದಲ್ಲಿರುವ ಬೆಳ್ಳೂರು ಕಮಾನ್ನಿಂದ ಜಮೀಸ್ತಾನಪೂರ ಕ್ರಾಸ್ವರೆಗಿನ 2ಕಿ.ಮೀ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಾತ್ರಿ ಹೊತ್ತಿನಲ್ಲಿ ಸಂಚಾರ ಮಾಡಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಹ ಸ್ಥಿತಿ ನಿಮಾರ್ಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುನ್ನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯೂ ಹಾಳಾಗಿದೆ, ಚಿದ್ರಿ ರಸ್ತೆಯಲ್ಲಿರುವ ಕೇಂದ್ರ ಶಾಲೆಯ ಕಾಂಪೌಂಡ್ ಪಕ್ಕದಿಂದ ಹಳೆ ಆದರ್ಶ ಕಾಲೊನಿ ಮೂಲಕ ರೈಲ್ವೆ ಗೇಟ್ವರೆಗೆ ಇದ್ದ ರಸ್ತೆಯ ಕಾಮಗಾರಿ ಅರ್ಧ ಮಾಡಿದ್ದಾರೆ. ಉಳಿದ ಹಣ ಗುತ್ತಿಗೆದಾರರ ಜೇಬಿಗೆ ಸೇರಿದೆ’ ಎಂದು ಆರೋಪಿಸಿದರು.
ಬೀದರ್ ನಗರದಾದ್ಯಂತ ಬೀದಿ ದೀಪಗಳಿಗೆ ಬಲ್ಬ್ಗಳು ಇಲ್ಲದ ಕಾರಣ ರಾತ್ರಿ ಹೊತ್ತಿನಲ್ಲಿ ವಾಹನ ಚಾಲಕರಿಗೆ, ಜನರಿಗೆ ತೊಂದರೆಯಾಗುತ್ತಿದೆ. ಚರಂಡಿಗಳಲ್ಲಿ ಹೂಳು ತುಂಬಿರುವ ಕಾರಣ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯ ಮೇಲೆ ಕೆಸರು ಆಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಳಾಗಿರುವ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಲ್ಲಾದ ಚಿಟ್ಟಾವಾಡಿ, ರಮೇಶ ಮರ್ಜಾಪೂರ, ಬಸವರಾಜ ನಂದಗಾಂವ, ನಿಲೇಶ ರಾಠೋಡ್, ನಾಗೇಶ ರಾಯಣ್ಣೂರ, ಮೋಸಿನ್ ಪಟೇಲ, ವಿಲಾಸ ಪಾಟೀಲ, ಧನರಾಜ.ಎನ್. ಚೆಟ್ಟಾವಾಡಿ, ಸಚೀನ ಕುದುರೆ, ಯೂಹಾನ ಮಿಸೇ, ಶಿವು ಚಿಟ್ಟಾವಾಡಿ, ರಾಜಗೊಂಡ ಚಿಟ್ಟಾವಾಡಿ, ಅಲೆಕ್ಸಾಂಡರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.