ಬಸವಕಲ್ಯಾಣ: ನಗರದ ಸದ್ಗುರು ಸದಾನಂದಸ್ವಾಮಿ ಮಠದ ಆವರಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆಗೆ ಅವಕಾಶ ನೀಡದೆ ಒಂದು ಬದಿಯಲ್ಲಿ ಮೂತ್ರಾಲಯ ನಿರ್ಮಿಸಬೇಕು. ಇಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಸವಪರ ಸಂಘಟನೆಗಳ ಪದಾಧಿಕಾರಿಗಳು ನಗರಸಭೆ ನೈರ್ಮಲ್ಯ ಅಧಿಕಾರಿ ಮನೋಜಕುಮಾರ ಅವರಿಗೆ ಮನವಿಪತ್ರ ಸಲ್ಲಿಸಿದ್ದಾರೆ.
ಇದು ಪ್ರಸಿದ್ಧ ದೇವಸ್ಥಾನವಾಗಿದೆ. ದೂರದ ಭಕ್ತರು ಹಾಗೂ ಸುತ್ತಮುತ್ತಲಿನ ಬಂಗಾರ ಹಾಗೂ ಬಟ್ಟೆ ಮಾರುಕಟ್ಟೆಯ ವ್ಯಾಪಾರಸ್ಥರು ನಿಯಮಿತವಾಗಿ ಇಲ್ಲಿಗೆ ದರ್ಶನಕ್ಕೆ ಬರುತ್ತಾರೆ. ಆದರೆ, ಪ್ರವೇಶ ದ್ವಾರದ ಪಕ್ಕದಲ್ಲಿಯೇ ಆವರಣದಲ್ಲಿನ ಗೋಡೆಗೆ ಹತ್ತಿಕೊಂಡು ಜನರು ಮೂತ್ರ ವಿಸರ್ಜನೆ ಮಾಡುತ್ತಾರೆ. ಅಲ್ಲದೆ ಕಸಕಡ್ಡಿ ಎಲ್ಲೆಂದರಲ್ಲಿ ಹರಡಿರುವ ಕಾರಣ ದುರ್ವಾಸನೆ ಸೂಸುವುದರಿಂದ ಇಲ್ಲಿಗೆ ಬರುವ ಭಕ್ತರು ಮೂಗು ಮುಚ್ಚಿಕೊಂಡೇ ಬರಬೇಕಾಗುತ್ತಿದೆ. ಸೊಳ್ಳೆ, ನೊಣಗಳ ಕಾಟವೂ ಹೆಚ್ಚಿದೆ.
ದೇವಸ್ಥಾನಕ್ಕೆ ಸಂಬಂಧಿಸಿದ ಅಂಗಡಿಗಳಿಗೆ ವ್ಯಾಪಾರಕ್ಕೆ ಬರುವವರು ಆವರಣದಲ್ಲಿಯೇ ಮೂತ್ರ ವಿಸರ್ಜನೆಗೆ ಮುಂದಾಗುತ್ತಾರೆ. ಹೀಗಿದ್ದರೂ ಸಂಬಂಧಿತರು ಮೂತ್ರಾಲಯ ಹಾಗೂ ಶೌಚಾಲಯದ ವ್ಯವಸ್ಥೆ ಕೈಗೊಂಡಿಲ್ಲ. ಆದ್ದರಿಂದ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಇನ್ನು ಮುಂದಾದರೂ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಪ್ರಮುಖರಾದ ಶಿವಕುಮಾರ ಬಿರಾದಾರ, ರವಿ ಕೊಳಕೂರ್, ಲೋಕೇಶ ಮೋಳಕೆರೆ, ಮಹೇಶ ಸುಂಟನೂರೆ, ಚೆನ್ನಪ್ಪ ರಾಜಾಪುರೆ, ಸಂಗಮೇಶ ಔಸೆ, ಉಮೇಶ ಶೀಲವಂತ, ನೀಲೇಶ ನಾಗವಂಶಿ, ಶಿವಕುಮಾರ ಕುದ್ರೆ, ಪ್ರದೀಪ ಪಾಟೀಲ, ಸಿದ್ದು ಬೋರಗೆ, ವಿಶಾಲ ಜೋಶಿ, ಶಂಕರ ಅಕ್ಕಣ್ಣ, ಸಂಗಮೇಶ ಸಜ್ಜನಶೆಟ್ಟಿ, ಪ್ರವೀಣ ಮಹಾನಂದ ಮೊದಲಾದವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.