ಬೀದರ್: ಡೆಂಗೆ ವಿರೋಧಿ ಮಾಸಾಚರಣೆ ಪ್ರಯುಕ್ತ ಡೆಂಗೆ ಜಾಗೃತಿಗಾಗಿ ನಗರದಲ್ಲಿ ಮಂಗಳವಾರ ವಾಹನಗಳ ರ್್ಯಾಲಿ ನಡೆಯಿತು.
ಡೆಂಗೆ ಜಾಗೃತಿಯ ಫಲಕಗಳನ್ನು ಹಿಡಿದುಕೊಂಡಿದ್ದ ಸರ್ಕಾರಿ ಶುಶ್ರೂಷಕ ಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನಗಳು ರ್್ಯಾಲಿಯಲ್ಲಿ ಪಾಲ್ಗೊಂಡಿದ್ದವು.
ಡಿಎಚ್ಒ ಕಚೇರಿಯಿಂದ ಆರಂಭವಾದ ರ್್ಯಾಲಿಯು ಜನವಾಡ ರಸ್ತೆ, ಅಂಬೇಡ್ಕರ್ ವೃತ್ತ, ಗವಾನ್ ಚೌಕ್, ಚೌಬಾರಾ, ಮಂಗಲಪೇಟ್, ಅಬ್ದುಲ್ ಫೈಜ್ ದರ್ಗಾ, ಲಾಡಗೇರಿ, ಕುಂಬಾರವಾಡ, ಸಿದ್ಧಾರೂಢ ಮಠ, ಮೈಲೂರು, ಚಿದ್ರಿ, ಆದರ್ಶ ಕಾಲೊನಿ, ನೌಬಾದ್, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಹಾಯ್ದು ಡಿಎಚ್ಒ ಕಚೇರಿಗೆ ಮರಳಿ ಸಮಾರೋಪಗೊಂಡಿತು.
ರ್್ಯಾಲಿಗೆ ಚಾಲನೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್ ಮಾತನಾಡಿ, ‘ಡೆಂಗೆ ಹಾಗೂ ಸೊಳ್ಳೆಗಳಿಂದ ಹರಡುವ ಇತರ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು’ ಎಂದು ಹೇಳಿದರು.
‘ಈಡೀಸ್ ಈಜಿಪ್ತಿ ಸೊಳ್ಳೆಗಳಿಂದ ಹರಡುವ ಡೆಂಗೆ ಮಾರಣಾಂತಿಕ ಕಾಯಿಲೆಯಾಗಿದೆ. ಜ್ವರ ಬಂದ ಕೂಡಲೇ ರಕ್ತ ತಪಾಸಣೆ ಮಾಡಿಸಿ ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು’ ಎಂದು ತಿಳಿಸಿದರು.
‘ಕಳೆದ ವರ್ಷ ಜಿಲ್ಲೆಯಲ್ಲಿ ಡೆಂಗೆ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಆದರೆ, ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ’ ಎಂದು ಹೇಳಿದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅನಿಲ ಚಿಂತಾಮಣಿ ಮಾತನಾಡಿ, ‘ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 25 ಡೆಂಗೆ ಪ್ರಕರಣಗಳು ವರದಿಯಾಗಿವೆ’ ಎಂದು ತಿಳಿಸಿದರು.
ಡಾ. ರವೀಂದ್ರ ಸಿರ್ಸೆ, ಡಾ. ದೀಪಾ ಖಂಡ್ರೆ, ಡಾ. ಇಂದುಮತಿ ಪಾಟೀಲ, ಡಾ. ರಾಜಶೇಖರ ಪಾಟೀಲ, ಡಾ. ಶಂಕರೆಪ್ಪ ಬೊಮ್ಮಾ, ಸುಭಾಷ ಮುದಾಳೆ, ಸಂಗಪ್ಪ ಕಾಂಬಳೆ, ಶಾಂತಪ್ಪ ಸುಂದರಕರ್, ರಾಜು ಕುಲಕರ್ಣಿ, ಜಾವೇದ್ ಕಲ್ಯಾಣಕರ್, ಕಮಲಾಕರ್ ಹಲಗೆ, ಎಂ.ಎ ಸತ್ತಾರ್, ಅರುಣಕುಮಾರ, ಮನೋಹರ ಅಲಶೆಟ್ಟಿ, ತಬ್ರೇಜ್, ಬಾಬು ಪ್ರಿಯಾ, ಶಿವಕಾಂತ, ಮಹೆಬೂಬಮಿಯ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.