ಕಮಲನಗರ: ಪಟ್ಟಣದಲ್ಲಿ 2017-18ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿ ಕೈಗೊಂಡ ₹1 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಂಗಳವಾರ ಚಾಲನೆ ನೀಡಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ರಸ್ತೆ ಅಭಿವೃದ್ಧಿ, ಪಟ್ಟಣದಲ್ಲಿ ₹12 ಲಕ್ಷ ವೆಚ್ಚದಲ್ಲಿ ಹೈಟೆಕ್ ಗ್ರಂಥಾಲಯ ಕಟ್ಟಡ ನಿರ್ಮಾಣ, ₹50 ಲಕ್ಷ ವೆಚ್ಚದಲ್ಲಿ ಚರಂಡಿ ಅಭಿವೃದ್ಧಿ ಕಾಮಗಾರಿ, ₹12 ಲಕ್ಷ ವೆಚ್ಚದ ಕಟ್ಟಡ ನಿರ್ಮಾಣ, ₹3 ಲಕ್ಷ ವೆಚ್ಚದಲ್ಲಿ ಸೋಲಾರ್ ದೀಪ ಮತ್ತು ₹20 ಲಕ್ಷ ವೆಚ್ಚದಲ್ಲಿ ದೂರದರ್ಶನ ಮತ್ತು ದೂರಸಂಪರ್ಕ ಪ್ರಸರಾಂಗದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ನೂತನ ತಾಲ್ಲೂಕು ಕೇಂದ್ರ ಘೋಷಣೆಯಾದ ಬಳಿಕ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಪಟ್ಟಣದ ಚಿತ್ರಣ ಬದಲಾಗಲಿದೆ. ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಅಭ್ಯರ್ಥಿಗಳಿಗೆ ಗ್ರಂಥಾಲಯ ಅನುಕೂಲವಾಗಲಿದೆ ಎಂದು ವಿಜಯ್ಸಿಂಗ್ ತಿಳಿಸಿದರು.
ಪಂಚಾಯತ್ರಾಜ್ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಸಜ್ಜನಶೆಟ್ಟಿ ಮಾತನಾಡಿ,‘ಕಮಲನಗರ ಪಟ್ಟಣದಲ್ಲಿ ₹50 ಲಕ್ಷ ವೆಚ್ಚದಲ್ಲಿ ಗ್ರಾಮದ ಪ್ರಮುಖ 33 ರಸ್ತೆಯ ಚರಂಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಮತ್ತು ದೇವಾಲಯ ಹಾಗೂ ಮಸೀದಿಗಳ ಅಭಿವೃದ್ಧಿಗಾಗಿ ₹6 ಲಕ್ಷ ಮೀಸಲಿಡಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಔರಾದ್ ತಾಲ್ಲೂಕು ಘಟಕ ಅಧ್ಯಕ್ಷ ಡಾ.ರತಿಕಾಂತ ಮಜಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಥುರಾಬಾಯಿ ಕದಂ, ಉಪಾಧ್ಯಕ್ಷ ಸಂತೋಷ ಬಿರಾದಾರ, ಜಿಲ್ಲಾ ಪಂಚಾಯಿತಿ ಸದಸ್ಯ ಬಾಬು ಹಜಾರಿ, ಗ್ರಾಮ ಪಂಚಾಯಿತಿ ಸದಸ್ಯ ಸಂಜೀವಕುಮಾರ ಮಹಾಜನ, ಪ್ರವೀಣ ಕದಂ, ಶಾಂತಕುಮಾರ ಬಿರಾದಾರ, ಪ್ರವೀಣ ಕುಲಕರ್ಣಿ, ಬಾಲಾಜಿ ಮಹಾಜನ, ನಾಗೇಶ ಪಾಟೀಲ, ಧರ್ಮೇಂದ್ರ ಬಿರಾದಾರ, ಪಿಡಿಒ ವಿನೋದ ಕುಲಕರ್ಣಿ, ಜೆಇ ರಾಜಕುಮಾರ ಉದಗೀರೆ ಹಾಗೂ ಗ್ರಾ.ಪಂ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.