ಬೀದರ್: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ಕೆಕೆಎಚ್ಆರ್ಎಸಿಎಸ್)ವು ಜಿಲ್ಲೆಯ 500 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ವೃತ್ತಿ ಸಾಮಗ್ರಿ ಕಿಟ್ ಒದಗಿಸಿ ನೆರವಾಗಿದೆ.
ಸಂಘದ ಪ್ರತಿನಿಧಿಗಳು, ಪ್ರವರ್ಧ ಸಂಸ್ಥೆ ಹಾಗೂ ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಜಿಲ್ಲೆಯ ಆಯಾ ತಾಲ್ಲೂಕುಗಳಲ್ಲಿ ಭಾನುವಾರ ಏಕಕಾಲಕ್ಕೆ ಟೀ ಪಾಯಿಂಟ್, ತರಕಾರಿ ಮಾರಾಟ, ಬೂಟ್ ಪಾಲಿಶ್, ಕ್ಷೌರ, ಸೈಕಲ್ ಪಂಕ್ಚರ್ ಜೋಡಣೆ, ಬಟ್ಟೆ ಇಸ್ತ್ರಿ, ಎಲೆಕ್ಟ್ರಿಕಲ್ ಉಪಕರಣಗಳ ದುರಸ್ತಿ, ಕಾರ್ಪೆಂಟರ್ ಸೇರಿ 8 ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಕಿಟ್ ವಿತರಿಸಿದರು.
ಬೀದರ್ನ ಜನಸೇವಾ ಶಾಲೆಯಲ್ಲಿ ನಡೆದ ಬೀದರ್ ತಾಲ್ಲೂಕಿನ ಬೀದಿ ಬದಿ ವ್ಯಾಪಾರಿಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ, ‘ಬದುಕಿಗೊಂದು ಕಿಟ್’ ಘೋಷವಾಕ್ಯದಡಿ ಬೀದಿ ಬದಿ ವ್ಯಾಪಾರಿಗಳಿಗೆ ಆಯಾ ವೃತ್ತಿಗಳ ಸಕಲ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸಲಾಗಿದೆ’ ಎಂದು ತಿಳಿಸಿದರು.
ಕೋವಿಡ್ ಕಾರಣ ಬೀದಿ ಬದಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಂಘದ ವೃತ್ತಿ ಸಾಮಗ್ರಿಗಳ ಕಿಟ್ ಅವರಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.
ಸಂಘವು ಕಲ್ಯಾಣ ಕರ್ನಾಟಕ ಭಾಗದ ಆರೂ ಜಿಲ್ಲೆಗಳಲ್ಲಿ ಕೃಷಿ, ಶಿಕ್ಷಣ, ಆರ್ಥಿಕ, ಸಾಂಸ್ಕøತಿಕ, ಸಾಮಾಜಿಕ ಮೊದಲಾದ ಕ್ಷೇತ್ರಗಳಲ್ಲಿ ಬದಲಾವಣೆಗೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಬಯಸುವವರಿಗೆ ಅನೇಕ ರೀತಿಯಲ್ಲಿ ಸಹಾಯಹಸ್ತ ಚಾಚಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೀದರ್ ತಾಲ್ಲೂಕಿನ 100 ಜನ ಬೀದಿ ಬದಿ ವ್ಯಾಪಾರಿಗಳಿಗೆ ಕಿಟ್ ವಿತರಿಸಲಾಯಿತು.
ಪ್ರವರ್ಧ ಸಂಸ್ಥೆಯ ಅಧ್ಯಕ್ಷ ಬಿ.ಎಸ್ ಕುದರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಕೌಜಲಗಿ, ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪುನೀತ್ ಸಾಳೆ, ಜನಸೇವಾ ಶಾಲೆ ಆಡಳಿತಾಧಿಕಾರಿ ಸೌಭಾಗ್ಯವತಿ, ಮುಖ್ಯ ಶಿಕ್ಷಕ ಶಿವಾನಂದ ಮಲ್ಲ, ಸಹ ಶಿಕ್ಷಕ ರಾಹುಲ್, ಕೆಕೆಎಚ್ಆರ್ಎಸಿಎಸ್ ಬೀದರ್ ತಾಲ್ಲೂಕು ಸಂಯೋಜಕ ಗಣಪತಿ ಹಡಪದ, ಸಚಿನ್ ನಾಗೂರೆ, ಪ್ರಿಯಂಕಾ, ವಿನೋದ ಬಿರಾದಾರ ಇದ್ದರು. ಗುರುನಾಥ ರಾಜಗೀರಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.